ಸರ್ಕಾರದಿಂದ ₹50 ಲಕ್ಷ ಮೊತ್ತದ ಚೆಕ್ ಹುತಾತ್ಮ ವೀರಯೋಧ ಕ್ಯಾ. ಪ್ರಾಂಜಲ್ ಕುಟುಂಬಕ್ಕೆ ​​ವಿತರಣೆ

ಆನೇಕಲ್: ಕ್ಯಾಪ್ಟನ್ ಪ್ರಾಂಜಲ್ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹುತಾತ್ಮ ವೀರ ಸೇನಾನಿ ಕುಟುಂಬಕ್ಕೆ 50 ಲಕ್ಷ ರಾಜ್ಯ ಸರ್ಕಾರದಿಂದ ಸಹಾಯಾರ್ಥವಾಗಿ ನೀಡುವುದಾಗಿ ಘೋಷಣೆ ಮಾಡಿದ್ದರು. ಉಗ್ರರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ ವಾಗ್ದಾನದಂತೆ ಜಿಲ್ಲಾಡಳಿತದ ಮೂಲಕ 50 ಲಕ್ಷ ರೂ.ಸಹಾಯಾರ್ಥವಾಗಿ ಚೆಕ್ ವಿತರಣೆ ಮಾಡಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಕ್ಯಾ. ಪ್ರಾಂಜಲ್​ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯಾರ್ಥವಾಗಿ ಚೆಕ್​ ವಿತರಣೆ ಮಾಡಿದೆ.

ಕೊಟ್ಟ ಮಾತಿನಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ್, ಬೆಂ.ಗ್ರಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ನಿರ್ದೆಶಕ ಶಶಿಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ನಂದನವನ ಬಡಾವಣೆಯಲ್ಲಿರುವ ಹುತಾತ್ಮ ಯೋಧ ಪ್ರಾಂಜಲ್ ನಿವಾಸಕ್ಕೆ ಆಗಮಿಸಿ ರಾಜ್ಯ ಸರ್ಕಾರದ ಪರವಾಗಿ ಚೆಕ್ ಹಸ್ತಾಂತರ ಮಾಡಿದ್ದಾರೆ.

ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ತಂದೆ ವೆಂಕಟೇಶ್ ಮಾತನಾಡಿ, ಇಂದಿಗೆ ಪ್ರಾಂಜಲ್ ಹುತಾತ್ಮನಾಗಿ 14 ದಿನ ಆಗಿದೆ. ನವೆಂಬರ್ 22ರಂದು ಉಗ್ರರ ವಿರುದ್ಧ ಎನ್ಕೌಂಟರ್​ನಲ್ಲಿ ವೀರಮರಣ ಹೊಂದಿದ್ದಾನೆ. ನಮ್ಮ ಕುಟುಂಬದವರ ಅಶಯದಂತೆ ಅಂತಿಮ ವಿಧಿವಿಧಾನ ನಡೆಸಲಾಗಿದೆ. ಪ್ರಾಂಜಲ್ ಅಂತಿಮ ವಿದಾಯದಂದು ಸೇನೆ, ಜಿಲ್ಲಾಡಳಿತ ಸೇರಿದಂತೆ ಎಲ್ಲರ ನೆರವು ಮರೆಯಲಾಗದು. ಅಭೂತಪೂರ್ವ ಅಂತಿಮೆಯಾತ್ರೆ ಮೆರವಣಿಗೆ ಆಯೋಜಿಸಿ ಪ್ರಾಂಜಲ್​ಗೆ ನಿಜ ಗೌರವ ಸಿಕ್ಕಿದೆ. ಹಾಗಾಗಿ ನಮ್ಮ ಕುಟುಂಬದವರ ಪರವಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಭಾವುಕರಾದರು.

ಕಳೆದು ತಿಂಗಳು ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದ ಭಾರತೀಯ ಸೇನಾಪಡೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿರುವ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಹುತಾತ್ಮರಾಗಿದ್ದರು.ಪ್ರಾಂಜಲ್ ತಾಯಿ ಅನುರಾಧ ಮತ್ತು ಪತ್ನಿ ಅದಿತಿ ಅವರಿಗೆ ತಲಾ 25 ಲಕ್ಷ ರೂ. ಚೆಕ್ ಹಸ್ತಾಂತರ ಮಾಡಿದ್ದಾರೆ. ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶಕ್ಕಾಗಿ ವೀರಯೋಧ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಸರ್ಕಾರದಿಂದ ಸಹಾಯಾರ್ಥವಾಗಿ 50 ಲಕ್ಷ ಮೌಲ್ಯದ ಚೆಕ್ ವಿತರಣೆಯನ್ನು ಮಾಡಲಾಗಿದೆ. ದೇಶಸೇವೆ ಎನ್ನುವುದು ಅತಿದೊಡ್ಡ ಕಾಯಕವಾಗಿದ್ದು, ಯುವ ಸಮುದಾಯಕ್ಕೆ ಹುತಾತ್ಮ ಯೋಧ ಪ್ರಾಂಜಲ್ ಮಾದರಿಯಾಗಿದ್ದಾರೆ. ನಮ್ಮ ದೇಶ, ನಾಮ್ಮ ನಾಡಿಗೆ ಪ್ರಾಣ ಮುಡಿಪು ಎನ್ನುವಂತಹವರಿಗೆ ಪ್ರಾಂಜಲ್ ಪ್ರೇರಣೆ ಎಂದು ಹೇಳಿಕೆ ನೀಡಿದ್ದಾರೆ.