ಗಾಂಜಾ ತುಳಸಿಯಷ್ಟೇ ಶ್ರೇಷ್ಠ, ಅದರಲ್ಲಿ ಔಷಧಿಯ ಗುಣವಿದೆ: ನಟಿ ನಿವೇದಿತಾ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾದ ಕಳಂಕ ಮೆತ್ತಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ನಟ ನಟಿಯರು ಒಂದೊಂದು ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೀಗ ನಟಿ ನಿವೇದಿತಾ ಗಾಂಜಾ ಕುರಿತು ನೀಡಿರುವ ಹೇಳಿಕೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

‘ದೇಶದಲ್ಲಿ ಸಾಕಷ್ಟು ಔಷಧೀಯ ಗುಣಗಳಿರುವ ಗಿಡಗಳಿವೆ. ಅದರಲ್ಲಿ ಗಾಂಜಾ ಕೂಡ ಒಂದಾಗಿದ್ದು, ಆಯುರ್ವೇದದಲ್ಲಿ ಅದಕ್ಕೆ ಒಳ್ಳೆಯ ಸ್ಥಾನವಿದೆ. ಅದು ತುಳಸಿಯಷ್ಟೆ ಶ್ರೇಷ್ಠವಾದದ್ದು’ ಎಂಬ ನಿವೇದಿತಾರ ಹೇಳಿಕೆಯೂ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಗೆ ಎಡೆಮಾಡಿಕೊಟ್ಟಿದೆ.

ಸನಾತನ ಧರ್ಮದಲ್ಲಿ ಗಾಂಜಾಗೆ ವಿಶೇಷ ಸ್ಥಾನವಿದೆ. ಆಯುರ್ವೇದದಲ್ಲಿ ಮಾತ್ರವಲ್ಲದೆ, ಅಲೋಪತಿಯಲ್ಲೂ ಸಹ ಗಾಂಜಾವನ್ನು ಬಳಸಲಾಗುತ್ತದೆ ಎಂದು ನಟಿ ನಿವೇದಿತಾ ಹೇಳಿದ್ದಾರೆ.

ಜಗತ್ತಿನ ಹಲವು ದೇಶಗಳಲ್ಲಿ ಗಾಂಜಾ ಮಾರಾಟ, ಬಳಕೆ ಕಾನೂನುಬದ್ಧವಾಗಿದೆ. ಗಾಂಜಾದಿಂದ ಅಪರಾಧ  ಪ್ರಮಾಣ ಸಹ ಕಡಿಮೆ ಆಗುತ್ತದೆ. ನಮ್ಮ ದೇಶದಲ್ಲಿಯೂ ಗಾಂಜಾವನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಮುಂದಾಗಬೇಕು ಎಂದಿದ್ದಾರೆ.