ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ಸೀಲ್ ಡೌನ್: ಮಂಡ್ಯ ಸೋಂಕಿತ ಓಡಾಡಿದ್ದ ಸ್ಥಳ ಪತ್ತೆ ಹಚ್ಚಿದ ಜಿಲ್ಲಾಡಳಿತ

ಉಡುಪಿ: ಮಂಡ್ಯ ಜಿಲ್ಲೆಯ ನಾಗಮಂಗಲದ ಕೊರೊನಾ ಸೋಂಕಿತ ವ್ಯಕ್ತಿ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್ ವೊಂದರಲ್ಲಿ ಇಳಿದು ಸ್ನಾನ ಹಾಗೂ ಉಪಹಾರ ಸೇವಿಸಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದೀಗ ಜಿಲ್ಲಾಡಳಿತ ಸೋಂಕಿತ ವ್ಯಕ್ತಿ ಓಡಾಡಿದ್ದ ಸ್ಥಳವನ್ನು ಪತ್ತೆಹಚ್ಚಿದೆ.
ಸೋಂಕಿತ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ನಲ್ಲಿ ಇಳಿದು ಸ್ನಾನ ಮತ್ತು ತಿಂಡಿ ಸವಿದಿದ್ದನು ಎನ್ನುವುದನ್ನು ಜಿಲ್ಲಾಡಳಿತ ಪತ್ತೆ ಮಾಡಿದ್ದು, ಆ ಪೆಟ್ರೋಲ್ ಬಂಕ್ ನ್ನು ಸೀಲ್ ಡೌನ್ ಮಾಡಿದೆ. ಹಾಗೆಯೇ ಬಂಕ್ ನ ಮಾಲೀಕ ಸಹಿತ ಏಳು ಮಂದಿಯನ್ನು ಕ್ವಾರಂಟೈನ್ ಮಾಡಿದೆ.
ಸೋಂಕಿತ ವ್ಯಕ್ತಿ ಲಾಕ್ ಡೌನ್ ಉಲ್ಲಂಘಿಸಿ ಮುಂಬೈನಿಂದ ಮಂಡ್ಯಕ್ಕೆ ಖರ್ಜೂರ ಸಾಗಿಸುವ ಕ್ಯಾಂಟರ್ ನಲ್ಲಿ ಪ್ರಯಾಣ ಬೆಳೆಸಿದ್ದನು. ಈ ವೇಳೆ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್ ವೊಂದರಲ್ಲಿ ಇಳಿದ್ದ ಎಂಬ ವಿಚಾರ ಆತನ ಟ್ರವೆಲ್ ಹಿಸ್ಟರಿಯಲ್ಲಿ ತಿಳಿದುಬಂದಿತ್ತು.