ಮಣಿಪಾಲ ಆರ್ ಟಿಒ ಕಚೇರಿಗೆ ಎಸಿಬಿ ದಾಳಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರ್ ಟಿಒ ಅಧಿಕಾರಿ ವರ್ಣೇಕರ್

ಉಡುಪಿ: ಬೆಂಕಿಗೆ ಅಹುತಿಯಾದ ಕಾರಿನ ತೆರಿಗೆ ಮರುಪಾವತಿ ಸಂಬಂಧಿಸಿದಂತೆ ಮಾಲೀಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಉಡುಪಿ ಉಪ ಸಾರಿಗೆ ಆಯುಕ್ತ ಹಾಗೂ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್ ಮತ್ತು ಸಹಾಯಕ ಮುನಾಫ್ ರೆಡ್ ಹ್ಯಾಂಡ್ ಆಗಿ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.
ಕಾರು ಮಾಲೀಕ ಉಡುಪಿಯ ವಿಘ್ನೇಶ್ ಎಂಬುವವರ ದೂರಿನಂತೆ ಇಂದು ಮಧ್ಯಾಹ್ನ ಮಣಿಪಾಲದ ಆರ್ ಟಿಒ ಕಚೇರಿಗೆ ಹಠಾತ್ ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ವಿಘ್ನೇಶ್ ಎಂಬವರ ಹೊಸ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಇದಕ್ಕೆ ಪಾವತಿಸಿದ್ದ ತೆರಿಗೆಯಲ್ಲಿ ಸುಮಾರು 65 ಸಾವಿರ ರೂ. ಹಣವನ್ನು ಸರಕಾರ ವಾಪಾಸ್ಸು ಮಾಡಬೇಕಾಗಿತ್ತು. ಈ ಹಣವನ್ನು ಬಿಡುಗಡೆ ಮಾಡಬೇಕಾಗಿದ್ದ ಉಡುಪಿ ಆರ್ ಟಿಒ ಆರ್.ಎಂ. ವರ್ಣೇಕರ್ ಶೇ.10ರಷ್ಟು ಅಂದರೆ 6500 ರೂ. ಲಂಚದ ಬೇಡಿಕೆಯನ್ನು ಮುಂದಿಟ್ಟಿದ್ದರು.
ಇದಕ್ಕೆ ಒಪ್ಪದ ವಿಘ್ನೇಶ್ ಮಾ.15ರಂದು ಉಡುಪಿ ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಇಂದು ಬೆಳಗ್ಗೆ ಪ್ರಕರಣ ದಾಖಲಿಸಿಕೊಂಡ ಎಸಿಬಿ ಪೊಲೀಸರು ಆರ್ ಟಿಒ ಕಚೇರಿಗೆ ದಾಳಿ ನಡೆಸಿದರು. ಈ ಸಂದರ್ಭ ವಿಘ್ನೇಶ್ ರಿಂದ ಲಂಚ ಸ್ವೀಕರಿಸುತ್ತಿದ್ದ ಆರ್ಟಿಒ ವರ್ಣೇಕರ್ ಹಾಗೂ ಮುನಾಫ್ ಎಂಬವರನ್ನು ಪೊಲೀಸರು ಬಂಧಿಸಿ, ನಗದು ಹಣವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಎಸಿಬಿ ಡಿವೈಎಸ್ಪಿ ಮಂಜುನಾಥ್, ಪೊಲೀಸ್ ನಿರೀಕ್ಷಕರಾದ ಜಯರಾಮ ಗೌಡ, ಯೋಗೀಶ್, ಸತೀಶ್ ಮೊದಲಾದರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.