ಮಣಿಪಾಲ: ಜನರಲ್ಲಿ ಭೀತಿ ಹುಟ್ಟಿಸಿದ ಚಿರತೆ ಕೊನೆಗೂ ಬೋನಿಗೆ ಬಿದ್ದು ಅರಣ್ಯ ಇಲಾಖೆಯ ಅತಿಥಿಯಾಗಿದೆ

ಮಣಿಪಾಲ: ಇಲ್ಲಿನ ವಿಜಯನಗರ ಕೋಡಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಇಂದು ನಸುಕಿನ ವೇಳೆ ಭಾರೀ ಗಾತ್ರದ ಚಿರತೆಯೊಂದು ಬಿದ್ದಿದೆ.

ಕಳೆದ ಕೆಲ ದಿನಗಳಿಂದ ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆಯು ಜನರಲ್ಲಿ ಭೀತಿ ಹುಟ್ಟಿಸಿತ್ತು. ಸುತ್ತಮುತ್ತಲಿನ ಮನೆಯ ಹಟ್ಟಿಯಲ್ಲಿದ್ದ ಕರು, ನಾಯಿ, ಕೋಳಿಗಳನ್ನು ಹಿಡಿದು ತಿನ್ನುತ್ತಿತ್ತು. ಚಿರತೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಜನರು ರಾತ್ರಿ ಹೊರಬರುವುದನ್ನೇ ನಿಲ್ಲಿಸಿದ್ದರು.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಚಿರತೆಯನ್ನು ಸೆರೆ ಹಿಡಿಯಲು ಇಲಾಖೆಯವರು ಬೋನು ಇರಿಸಿದ್ದರು. ಅದಕ್ಕೆ ಇಂದು ನಸುಕಿನ ವೇಳೆ ಚಿರತೆ ಸೆರೆಯಾಗಿದೆ.

ಖೆಡ್ಡಾಕ್ಕೆ ಬಿದ್ದ ಚಿರತೆ:
ಬೋನಿನೊಳಗೆ ಎರಡು ನಾಯಿ ಮರಿಗಳನ್ನು ಇರಿಸಿ ಚಿರತೆಯನ್ನು ಖೆಡ್ಡಾಕ್ಕೆ ಬೀಳಸಲಾಗಿತ್ತು. ಜನರ ನಿದ್ರೆ ಕೆಡಿಸಿದ್ದ ಚಿರತೆ ಅಂತೂ ಬೋನಿಗೆ ಬಿದ್ದು ಅರಣ್ಯ ಇಲಾಖೆಯ ಅತಿಥಿಯಾಗಿದೆ.

ಸರಳೇಬೆಟ್ಟು ವಾರ್ಡಿನ ನಗರಸಭೆ ಸದಸ್ಯೆ ವಿಜಯಲಕ್ಷ್ಮೀ ನಾಯಕ್, ಸ್ಥಳೀಯರಾದ ದಿವಾಕರ್ ನಾಯ್ಕ್, ಉದಯ್, ರಮೇಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಸಹಕರಿಸಿದರು.