ಮಣಿಪಾಲ: ವ್ಯಕ್ತಿಗೆ ಹಲ್ಲೆ ನಡೆಸಿ ಬಂಗಾರದ ಚೈನ್, ಮೊಬೈಲ್, ಸ್ಕೂಟರ್ ನೊಂದಿಗೆ ಎಸ್ಕೇಪ್

ಮಣಿಪಾಲ: ವ್ಯಕ್ತಿಯೊಬ್ಬರಿಗೆ ಪರಿಚಿತನೇ ದೋಖಾ ಮಾಡಿದ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಉಡುಪಿ ಹೆರ್ಗಾ ನಿವಾಸಿ ರಮೇಶ್ ಆಚಾರ್ಯ ಎಂಬವರಿಗೆ ಪರಿಚಿತನಾದ ಪ್ರಶಾಂತ್ ಎಂಬಾತನಿಂದಲೇ ಸಖತ್ ದೋಖಾ ಆಗಿದೆ.‌

ರಮೇಶ್ ಅವರು ನಿನ್ನೆ ರಾತ್ರಿ 9ಗಂಟೆ ಸುಮಾರಿಗೆ
ಆರೋಪಿ ಪ್ರಶಾಂತ್ ನನ್ನು ಭೇಟಿಯಾಗಿದ್ದರು. ಬಳಿಕ ಪ್ರಶಾಂತ್, ಡ್ರಿಂಕ್ಸ್ ಕುಡಿಯುವ ಎಂದು ಹೇಳಿದಂತೆ ಉಡುಪಿಯಲ್ಲಿ ಬಿಯರ್‌‌ ಖರೀದಿಸಿ ಇಬ್ಬರೂ ಕರಂಬಳ್ಳಿ ಗುಜರಿ ಅಂಗಡಿಯ ಬಳಿ ಹೋಗಿ ಬಿಯರ್‌‌ ಸೇವನೆ ಮಾಡಿದ್ದಾರೆ.

ಬಳಿಕ ರಾತ್ರಿ ಸುಮಾರು 10.30ಕ್ಕೆ ಪ್ರಶಾಂತ್ ನು ರಮೇಶ್ ಅವರ ಮೊಬೈಲ್ ನೀಡುವಂತೆ ಕೇಳಿದ್ದಾನೆ. ಆದರೆ, ರಮೇಶ್ ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ಆಗ ಆತ ರಮೇಶ್ ಮುಖಕ್ಕೆ ಕೈಯಿಂದ ಹೊಡೆದು ರೆಡ್‌ ಮಿ ಮೊಬೈಲ್ ಪೋನನ್ನು ಕಸಿದುಕೊಂಡಿದ್ದಾನೆ.

ಮೊಬೈಲ್ ವಾಪಾಸ್ ನೀಡುವಂತೆ ಹೇಳಿದಾಗ ಆರೋಪಿ ಪ್ರಶಾಂತ್ ಹಲ್ಲೆ ಮಾಡಿ, ರಮೇಶ್ ಕುತ್ತಿಗೆಯಲ್ಲಿದ್ದ 9 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಸ್ಕೂಟರ್ ಕೀಯನ್ನು ಸುಲಿಗೆ ಮಾಡಿ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದಾನೆ‌. ಈ ಬಗ್ಗೆ ರಮೇಶ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.