ಕಂಬಳ ವೀಕ್ಷಣೆಗೆ ವಿಶ್ವದ ಪ್ರವಾಸಿಗರನ್ನು ಸೆಳೆಯಬಹುದು, ಪ್ರವಾಸೋದ್ಯಮ ಅಭಿವೃದ್ದಿ‌ ಕುರಿತು ಸಂವಾದದಲ್ಲಿ ಸಚಿವ‌ ಸಿ.ಟಿ. ರವಿ ಅಭಿಮತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೆ ಕರಾವಳಿಯಲ್ಲಿ ಪ್ರವಾಸಿ ತಾಣಗಳನ್ನು ಪ್ರಸಿದ್ದಿ ಪಡಿಸುವುದರಲ್ಲಿ ನಾವು ವಿಫಲವಾಗಿದ್ದೇವೆ.‌
ಅಲ್ಲದೇ ಕರಾವಳಿಯ ಕಂಬಳ ಕ್ರೀಡೆಯನ್ನು ವಿಶ್ವ ಮಟ್ಟದಲ್ಲಿ ನಾವು ಪ್ರೊಮೋಟ್ ಮಾಡಿ ವಿಶ್ವದ ಪ್ರವಾಸಿಗರನ್ನು ಸೆಳೆಯಬಹುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದರು.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ದಕ್ಷಿಣ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಪತ್ರಕರ್ತರ ಜೊತೆಗೆ ಚರ್ಚೆ ನಡೆಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು  ಐ ಲ್ಯಾಂಡ್‌ಗಳಿವೆ. ಸಮುದ್ರ ತೀರಗಳಿವೆ. ಕ್ರೀಡಾ ಅಭಿವೃದ್ಧಿಗೂ ಅವಕಾಶವಿದೆ. ನೂರಾರು ದೇವಸ್ಥಾನಗಳು, ವಿದ್ಯಾಸಂಸ್ಥೆಗಳಿವೆ. ಇವುಗಳನ್ನು ಆಕರ್ಷಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ನಮ್ಮಲ್ಲಿ ಅವಕಾಶವಿದೆ. ಕರಾವಳಿಯ ಕಂಬಳ ಕ್ರೀಡೆಯನ್ನು ವಿಶ್ವ ಮಟ್ಟದಲ್ಲಿ ನಾವು ಪ್ರಮೋಟ್ ಮಾಡಿ ವಿಶ್ವದ ಪ್ರವಾಸಿಗರನ್ನು ಸೆಳೆಯಬಹುದು. ಈ‌ ಎಲ್ಲ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಕರಾವಳಿಯ ಯಕ್ಷಗಾನ ಕಲೆಯನ್ನು ‌ಎಲ್ಲರಿಗೂ ತಲುಪುವಂತೆ ಮಾಡಬೇಕು. ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸಬಹುದು ಅಂತ ಅಧ್ಯಯನ ಮಾಡುವ ನಿಟ್ಡಿನಲ್ಲಿ‌ ಜಿಲ್ಲೆಗೆ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ‌ಪ್ರಯತ್ನ ಮಾಡುತ್ತೇನೆ‌ ಎಂದು ಹೇಳಿದರು.
ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಉಪಸ್ಥಿತರಿದ್ದರು.