ಮುಗಿಯದ ಪಂಪ್ವೆಲ್ ಕಾಮಗಾರಿ: ಅಧಿಕಾರಿಗಳ ವಿರುದ್ಧ ನಳಿನ್ ಆಕ್ರೋಶ

ಮಂಗಳೂರು: ಮಂಗಳೂರಿನ ಪಂಪ್ ವೆಲ್‌ ಫ್ಲೈಓವರ್ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನ ಪಂಪ್ ವೆಲ್‌ ಫ್ಲೈಓವರ್ ಜನವರಿ ಮೊದಲವಾರ ಲೋಕಾರ್ಪಣೆ ಮಾಡಲಾಗುವುದು ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಕೆಲ ತಿಂಗಳ ಹಿಂದೆ ಹೇಳಿಕೆ ನೀಡಿದ್ದರು, ಆದರೆ ಫ್ಲೈಓವರ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ಕರೆಯಲಾಗಿತ್ತು.
ಡಿಸೆಂಬರ್ 31 ಕ್ಕೆ ಅಧಿಕಾರಿಗಳು ಕಾಮಗಾರಿ ಆಗುತ್ತೆ ಎಂದು ಹೇಳಿದ್ದರು, ನಮ್ಮ ಕಡೆಯಿಂದ ಆಗಬೇಕಾದ ವ್ಯವಸ್ಥೆಯನ್ನು ನಾವು ಮಾಡಿ ಕೊಟ್ಟಿದ್ದೇವೆ. ಆದರೆ ನವಯುಗ ಕಂಪನಿ‌ ಮಾತ್ರ ಅವಧಿಗೆ ಮುನ್ನ ಕೆಲಸ ಮಾಡಿಕೊಟ್ಟಿಲ್ಲ ಇದರಿಂದ ಪಂಪ್ ವೆಲ್ ಫ್ಲೈಓವರ್ ಉದ್ಘಾಟನೆ ವಿಳಂಬವಾಗಿದೆ. ಸರ್ಕಾರಕ್ಕೆ, ನಮಗೆ ಕೆಟ್ಟ ಹೆಸರನ್ನು ತಂದಿದೆ ಎಂದರು.
ಇನ್ನೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಇದರ ಇನ್ ಚಾರ್ಜ್ ಕೊಟ್ಟಿದ್ದೇವೆ. ನವಯುಗ ನಿರ್ದೇಶಕ, ಮ್ಯಾನೇಜರ್ ವಿರುದ್ದ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದೇವೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.