ಕೆಎಂಸಿ ಮಹಿಳಾ ಮತ್ತು ಮಕ್ಕಳ ಕೇಂದ್ರ ಉದ್ಘಾಟಿಸಿದ ಶಿಲ್ಪಾ ಶೆಟ್ಟಿ

ಮಂಗಳೂರು: ಮಂಗಳೂರಿನಲ್ಲಿ ಕೆಎಂಸಿ ಸಂಸ್ಥೆ ಪ್ರಾರಂಭಿಸಿದ ಮಹಿಳಾ ಮತ್ತು ಮಕ್ಕಳ ಕೇಂದ್ರವನ್ನು ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಉದ್ಘಾಟಿಸಿದರು.
ಇದೇ ವೇಳೆ ಸಂಸ್ಥೆಯ ವತಿಯಿಂದ ಗರ್ಭಿಣಿಯರಿಗೆ ಆಯೋಜಿಸಲಾಗಿದ್ದ ವಾವ್ ಮಾಮ್ ಸ್ಪರ್ಧಾ ಕಾರ್ಯಕ್ರಮದ‌ ವಿಜೇತರನ್ನು ಘೋಷಿಸಿ, ಬಹುಮಾನ ವಿತರಿಸಿ ಶಿಲ್ಪಾ ಶೆಟ್ಟಿ ಕಿರೀಟ ತೊಡಿಸಿದರು.
ಸುಮಾರು 350 ಗರ್ಭಿಣಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮವಾಗಿ 10 ಗರ್ಭಿಣಿಯರು ಸ್ಪರ್ಧೆಯಲ್ಲಿ ಇದ್ದರು. ಬಳಿಕ ತುಳುವಿನಲ್ಲೇ ಮಾತು ಪ್ರಾರಂಭಿಸಿದ ಬಾಲಿವುಡ್ ಬೆಡಗಿ ಶಿಲ್ಪಾ, ತಾಯಿ ಅಥವಾ ಮಹಿಳೆಯರು ತಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕರ್ನಾಟಕದಲ್ಲಿ ಹುಟ್ಟಿರಿವುದು, ಅದರಲ್ಲೂ ಬಂಟ ಸಮುದಾಯಕ್ಕೆ ಸೇರಿರುವುದರಲ್ಲಿ ವಿಶೇಷತೆಯಿದೆ.
ಗರ್ಭಾವತಿಯಾಗಿರುವ ಸಂದರ್ಭ ಹಾಗೂ ಬಳಿಕವೂ ಹೆಚ್ಚು ಪ್ರಾಮುಖ್ಯತೆ ಇಲ್ಲಿ ನೀಡಲಾಗುತ್ತದೆ. ಇದರಿಂದಲೇ ತಾಯಿಯ ಮರಣ ಪ್ರಮಾಣ ಬಹಳಷ್ಟು ಇಲ್ಲಿ ಕಡಿಮೆ. ಗರ್ಭಿಣಿ ಮಹಿಳೆ ಹಾಗೂ ತಾಯಿಯ ಆರೋಗ್ಯ ಕಾಪಾಡುವಲ್ಲಿ ಇಲ್ಲಿನ ವೈದ್ಯಕೀಯ ಸಂಸ್ಥೆಗಳು ಕೂಡಾ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.