ಮಂಗಳೂರು: ಖಾಸಗಿ ಬಸ್ಸುಗಳ‌ ಮೇಲೆ ಪುತ್ತೂರು, ವಿಟ್ಲ, ಬಂಟ್ವಾಳದಲ್ಲಿ ಕಲ್ಲು ತೂರಾಟ

ಮಂಗಳೂರು: ಖಾಸಗಿ ಬಸ್ಸುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ವಿಟ್ಲ, ಪುತ್ತೂರು, ಬಂಟ್ವಾಳ‌ ಮೊದಲಾದ ಭಾಗದಲ್ಲಿ‌ ನಡೆದಿದೆ.
ಪುತ್ತೂರು ಕಡೆಗೆ ತೆರಳುವ ಸೆಲಿನಾ ಹಾಗೂ ಸೇಫ್ ವೇ ಸೇರಿದಂತೆ ಸುಮಾರು 7 ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಘಟನೆಯಲ್ಲಿ ಬಸ್ ಗಳ ಗಾಜು ಸಂಪೂರ್ಣ ಪುಡಿಯಾಗಿದ್ದು, ಕೆಲವು‌ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ಕೇರಳ ಭಾಗದ ಅಡ್ಯನಡ್ಕದಲ್ಲಿ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲದ ಹಲವು ಮಂದಿ ಬಜರಂಗದಳದ ಪ್ರಮುಖರ ಮೇಲೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೇ ಕಾರಣದಿಂದ ಕೃತ್ಯ ನಡೆದಿರಬಹುದೇ‌  ಎಂದು ಶಂಕಿಸಲಾಗಿದೆ.
ಸಾಲೆತ್ತೂರು, ಕುದ್ದುಪದವು, ಮೈರ, ಅಡ್ಯನಡ್ಕದಲ್ಲಿಯೂ ಕಲ್ಲು ತೂರಾಟ ನಡೆದಿದ್ದು, ಬಸ್ಸುಗಳಿಗೆ ಹಾನಿಮಾಡಲಾಗಿದೆ. ವಿಟ್ಲ ಮತ್ತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಂಬೂರು ಬರ್ಕೆಯಲ್ಲಿ ಸರಕಾರಿ ಬಸ್ ಗೆ ಕಲ್ಲೆಸೆಯಲಾಗಿದೆ ಎನ್ನಲಾಗಿದೆ.