ಮಂಗಳೂರು: ಅಕ್ರಮ ‌ಮರಳು ಸಾಗಾಟ; ಒರ್ವ ಬಂಧನ; ಲಾರಿ ವಶ

ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ 10 ಟನ್ ಮರಳನ್ನು ಮಂಗಳೂರಿನ ಕದ್ರಿ ಪೊಲೀಸರು ಸ್ವಾಧೀನಪಡಿಸಿಕೊಂಡು, ಚಾಲಕನನ್ನು ಪದವು ಎಂಬಲ್ಲಿ ಬಂಧಿಸಿದ್ದಾರೆ.
ಪಡೀಲ್ ಕಣ್ಣೂರು ನಿವಾಸಿ ಮುಹಮ್ಮದ್ ನವಾಝ್, ಬಂಧಿತ ಆರೋಪಿ.
ಪರವಾನಿಗೆ ರಹಿತ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕದ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಯು ಮಂಗಳೂರು ನಗರದ ಅಡ್ಯಾರ್‌ನಿಂದ ಉಡುಪಿ ಕಡೆಗೆ ಲಾರಿಯಲ್ಲಿ ಸುಮಾರು 10 ಟನ್ ಮರಳು ಸಾಗಾಟ ಮಾಡುತ್ತಿದ್ದ. ಟಿಪ್ಪರ್ ಲಾರಿ ಸಹಿತ ಮರಳನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ 10 ಟನ್ ಮರಳು ಹಾಗೂ ಲಾರಿ ಮೌಲ್ಯ 5.07 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಕುರಿತು ಮಂಗಳೂರು ಪೂರ್ವ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.