ಶಾಲೆಯಲ್ಲಿ ಮೊಟ್ಟೆ ನೀಡಿದ್ದಕ್ಕೆ 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯನ್ನೇ ಬದಲಾಯಿಸಿದ್ರು!

ಮಂಡ್ಯ: ಮಂಡ್ಯದ ಆಲಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೊಟ್ಟೆ ಕೊಡುವ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದಾಗಿನಿಂದ ಈ ಗ್ರಾಮದ ಜನರು, ಶಾಲೆಯಲ್ಲಿ ಮೊಟ್ಟೆ ಕೊಡುವುದು ಬೇಡಾ ಎಂದು ಒಕ್ಕೊರಲಿನಿಂದ ತೀರ್ಮಾನ ಮಾಡಿದ್ದರು. ಏಕೆಂದರೆ ಈ ಶಾಲೆ ಇರುವ 100 ಮೀಟರ್ ಅಂತರದಲ್ಲಿ ವೀರಭದ್ರಸ್ವಾಮಿ‌ ದೇವಸ್ಥಾನವಿದೆ. ಹೀಗಾಗಿ, ದೇವಸ್ಥಾನದ ಸುತ್ತಮುತ್ತ ಮಾಂಸಾಹಾರ ಹಾಗೂ ಮೊಟ್ಟೆಯನ್ನು ಸೇವನೆ ಮಾಡಲ್ಲ. ಶಾಲೆಯಲ್ಲೂ ಮೊಟ್ಟೆಯ ಬದಲಿಗೆ ಇಷ್ಟು ದಿನ ಕಡ್ಲೆ ಮಿಠಾಯಿ ಹಾಗೂ ಬಾಳೆಹಣ್ಣನ್ನು ಕೊಡಲಾಗುತ್ತಿತ್ತು.

ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ:
ಕಳೆದ 20 ದಿನಗಳ ಹಿಂದೆ ಈ ಶಾಲೆಯಲ್ಲಿ ಓದುವ ಕೆಲ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ, ಅಧಿಕಾರಿಗಳು ಕಾನೂನಿನ ಪ್ರಕಾರ ಮೊಟ್ಟೆ ಕೊಡಲೇಬೇಕೆಂದು, ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆಯನ್ನು ನೀಡಿದ್ದಾರೆ.

ಅಧಿಕಾರಿಗಳ ಈ ನಿರ್ಧಾರ ಇಲ್ಲಿನ ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ, 124 ಮಕ್ಕಳ ಪೈಕಿ 70ಕ್ಕೂ‌ ಅಧಿಕ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಆಲಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಿಡಿಸಿದ್ದಾರೆ. ಇದೀಗ 70ಕ್ಕೂ ಅಧಿಕ ಮಕ್ಕಳನ್ನು ಆಲಕೆರೆಯ ಪಕ್ಕದ ಊರಾದ ಕೀಲಾರ ಗ್ರಾಮದ ಸರ್ಕಾರಿ ಶಾಲೆ‌ ಹಾಗೂ ಇತರ ಶಾಲೆಗಳಿಗೆ ದಾಖಲು ಮಾಡಿದ್ದಾರೆ.