ಪ.ಬಂಗಾಳ, ಪಂಜಾಬ್ ನಲ್ಲಿ “ಕೈ” ಕಿರಿಕಿರಿ: ಏಕಾಂಗಿ ಸ್ಪರ್ಧೆಗೆ ಮಮತಾ ಬ್ಯಾನರ್ಜಿ, ಭಗವಂತ್ ಮಾನ್ ಒಲವು

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪ. ಬಂಗಾಳದ 42 ಲೋಕಸಭಾ ಸ್ಥಾನಗಳಿಗೆ ತನ್ನ ಸ್ವಂತ ಬಲದ ಮೇಲೆ ಚುನಾವಣೆಯನ್ನು ಎದುರಿಸಲಿದೆ ಮತ್ತು ಫಲಿತಾಂಶ ಪ್ರಕಟವಾದ ನಂತರವೇ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಪರಿಗಣಿಸಲಿದೆ ಎಂದು ಉಗ್ರ ಮಮತಾ ಬ್ಯಾನರ್ಜಿ ಬುಧವಾರ ಘೋಷಿಸಿದ್ದಾರೆ.

“ನಾನು ಕಾಂಗ್ರೆಸ್ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಾನು ಅವರಿಗೆ (ಕಾಂಗ್ರೆಸ್‌ಗೆ) ಹಲವು ಪ್ರಸ್ತಾವನೆಗಳನ್ನು ನೀಡಿದ್ದೆ. ಆದರೆ ಅವರು ತಿರಸ್ಕರಿಸಿದರು. (ಉಳಿದ) ದೇಶದಲ್ಲಿ ಏನು ಮಾಡಲಾಗುವುದು ಎಂಬುದರ ಬಗ್ಗೆ ನನಗೆ ಕಾಳಜಿ ಇಲ್ಲ. ಆದರೆ ನಾವು ಜಾತ್ಯತೀತ ಪಕ್ಷವಾಗಿದ್ದೇವೆ ಮತ್ತು ಬಂಗಾಳದಲ್ಲಿ ನಾವೇ ಬಿಜೆಪಿಯನ್ನು ಸೋಲಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ತನಗೆ ಮಾಹಿತಿ ನೀಡದೆ ರಾಜ್ಯ ಪ್ರವೇಶಿಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾನರ್ಜಿ ಅವರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, ಬಂಗಾಳದಲ್ಲಿ ಕಾಂಗ್ರೆಸ್-ತೃಣಮೂಲ ಮೈತ್ರಿ ಇರುತ್ತದೆ. “ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಇರುತ್ತದೆ. ಬಿಜೆಪಿ ಸ್ಥಾನಗಳನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ನಾವು ಟಿಎಂಸಿ ಜೊತೆ ಮಾತನಾಡುತ್ತೇವೆ. ಮಮತಾ ಬ್ಯಾನರ್ಜಿ ಅವರು ಭಾರತ ಮೈತ್ರಿಕೂಟದಲ್ಲಿ ಹಿರಿಯ ನಾಯಕಿಯಾಗಿದ್ದಾರೆ. ಇವು ಸಣ್ಣ ವ್ಯತ್ಯಾಸಗಳು, ಅವುಗಳನ್ನು ಪರಿಹರಿಸಲಾಗುವುದು” ಎಂದಿದ್ದಾರೆ

ಈ ಸುದ್ದಿಯ ಬೆನ್ನಲ್ಲೇ ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡಾ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ.

ಪಂಜಾಬಿನ ಎಲ್ಲಾ ಲೋಕಸಭಾ ಸೀಟುಗಳಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದ ಅವರು “ಆಮ್ ಆದ್ಮಿ ಪಕ್ಷವು ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ 40 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೊದಲು ನಾವು ಸಮೀಕ್ಷೆಯನ್ನು ಮಾಡುತ್ತಿದ್ದೇವೆ” ಎಂದಿದ್ದಾರೆ.

ಕಾಂಗ್ರೆಸ್ ಮತ್ತು ಇತರ ಸ್ಥಳೀಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಐಕ್ಯಮತ ಇಲ್ಲದಿರುವ ಕಾರಣದಿಂದಾಗಿ ಸ್ಥಳೀಯ ಪಕ್ಷಗಳು ಏಕಾಂಗಿ ಹೋರಾಟ ನಡೆಸಲು ಮುಂದಾಗಿವೆ ಎನ್ನಲಾಗಿದೆ.