ಮಲೆಕುಡಿಯ ಸಂಘದ ಕಟ್ಟಡಕ್ಕೆ 2 ಕೋ.ರೂ. ಅನುದಾನ ಬಿಡುಗಡೆ: ವಿ. ಸುನಿಲ್ ಕುಮಾರ್

ಕಾರ್ಕಳ: ಮಲೆಕುಡಿಯ ಸಂಘದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ  ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲು ಕಾರ್ಕಳ ತಾಲೂಕಿನ ಮಾಳದಲ್ಲಿ ನಿರ್ಮಾಣ ಆಗಲಿರುವ ಜಿಲ್ಲಾ ಮಲೆಕುಡಿಯ ಸಂಘದ ಕಟ್ಟಡಕ್ಕೆ ಸರಕಾರದ ವತಿಯಿಂದ 2ಕೋ. ರೂ. ಅನುದಾನ ಬಿಡುಗಡೆಗೊಂಡಿದ್ದು, ಮಂಜೂರು ಆದೇಶ ಪ್ರತಿಯನ್ನು ಮಲೆಕುಡಿಯ ಸಂಘದ  ಜಿಲ್ಲಾಧ್ಯಕ್ಷ ಮಂಜಪ್ಪ ಗೌಡ ಶಾಸಕ ವಿ. ಸುನಿಲ್ ಕುಮಾರ್ ಅವರು ಸಂಘದ ಸಮಾಲೋಚನಾ ಸಭೆಯಲ್ಲಿ  ಹಸ್ತಾಂತರಿಸಿದರು.

ಈ ಸಂದರ್ಭ ಶಾಸಕರಾದ ವಿ.ಸುನಿಲ್ ಕುಮಾರ್ ಮಾತನಾಡಿ, ಮಲೆಕುಡಿಯ ಜನಾಂಗದ ಹತ್ತಾರು ಸಮಸ್ಯೆಗಳು ನನ್ನ ಬಳಿ ಬಂದಿದ್ದು, ಅದನ್ನು ಹಂತ ಹಂತವಾಗಿ ಈಡೇರಿಸಿ ಕೊಟ್ಟ ಬಗ್ಗೆ ಅತ್ಯಂತ ತೃಪ್ತಿ ಇದೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ಮಲೆಕುಡಿಯ ಸಂಘವು ನನ್ನ ಬಳಿ ಸಮುದಾಯದ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲು ದೊಡ್ಡ ಮಟ್ಟದ ಸಮುದಾಯ ಭವನವನ್ನು ನಿರ್ಮಿಸಿ ಕೊಡುವಂತೆ ಪದೇ ಪದೇ ಒತ್ತಡವನ್ನು ಹೇರುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲಿ 20 ಲಕ್ಷ ರೂ. ಮೊತ್ತದಲ್ಲಿ ಪ್ರಾರಂಭಿಕ ಹಂತದ  ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಸರ್ಕಾರದಿಂದ 2 ಕೋಟಿ ರೂ. ಅನುದಾನ ಮಂಜೂರು ಆಗಿದ್ದು, ಕಾಮಗಾರಿ ಅತೀ ಶೀಘ್ರ ಪ್ರಾರಂಭಗೊಂಡು ವರ್ಷದ ಅಂತ್ಯದೊಳಗೆ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ರೀತಿಯ ಬೇಡಿಕೆಗಳನ್ನು ಶಾಸಕರ ಮುಂದೆ ಇಟ್ಟಾಗ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಿದ್ದಾರೆ. ಇದೀಗ 2 ಕೋಟಿ ಅನುದಾನವನ್ನು ಸಮುದಾಯ ಭವನ ನಿರ್ಮಾಣಕ್ಕೆ ಒದಗಿಸಿ ಕೊಟ್ಟಿರುವುದು ಸಮುದಾಯದಲ್ಲಿ ಸಂತಸ ತಂದಿದೆ ಎಂದು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಲೆಕುಡಿಯ ಸಂಘದ ಗೌರವ ಸಲಹೆಗಾರರಾದ ನೋಣಯ್ಯ ಗೌಡ ರೆಂಜಾಳ, ಜಿಲ್ಲಾ ಮಲೆಕುಡಿಯ ಸಂಘದ ಉಪಾಧ್ಯಕ್ಷರಾದ ಸುಂದರ ಗೌಡ ಮುದ್ರಾಡಿ, ಗೋಪಾಲ್ ಗೌಡ ಮಾಳ, ಪೂರ್ವ ಜಿಲ್ಲಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಹೆಬ್ರಿ ತಾಲೂಕು ಸಮಿತಿಯ ಅಧ್ಯಕ್ಷ ಉದಯ್ ಗೌಡ ಬಲ್ಲಾಡಿ, ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷರಾದ ಶೇಖರ್ ಗೌಡ ಮಾಳ ಉಪಸ್ಥಿತರಿದ್ದರು.
ಸಭೆಯಲ್ಲಿ ರಾಜ್ಯ ಮಲೆಕುಡಿಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಜಿಲ್ಲಾ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಸಾಧು ಗೌಡ ನಾರ್ಜೆ, ಕೋಶಾಧಿಕಾರಿ ವಿಷ್ಣುಮೂರ್ತಿ ಕೆರ್ವಾಶೆ, ಸಹ ಕಾರ್ಯದರ್ಶಿ ಕಾವ್ಯ ಶಿರ್ಲಾಲು, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗೌಡ ಅಂಡಾರು, ವಕ್ತಾರ ಸುಂದರ ಗೌಡ ರೆಂಜಾಳ, ಕಾರ್ಕಳ ತಾಲೂಕು ಸಮಿತಿಯ ಗೌರವ ಸಲಹೆಗಾರರಾದ ಗೋವಿಂದ ಗೌಡ ಮಾಳ, ಉಪಾಧ್ಯಕ್ಷರಾದ ಡೀಕಯ್ಯ ಗೌಡ ಕನ್ಯಾಲು, ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಕೆರ್ವಾಶೆ, ನಾನಾ ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಮಾಜಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯ ಮಲೆಕುಡಿಯ ಸಂಘದ  ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಮಲೆಕುಡಿಯ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರಶಾಂತ್ ಹೆರ್ಮುಂಡೆ ವಂದಿಸಿದರು.