ಉಡುಪಿ ನರ್ಮ್ ಬಸ್ ನಿಲ್ದಾಣದಲ್ಲಿ ನಿರ್ವಹಣೆಯ ಕೊರತೆ: ಸಾಂಕ್ರಾಮಿಕ ರೋಗ ಹರಡುವ ಭೀತಿ.!

ಉಡುಪಿ: ನಗರದ ನರ್ಮ್ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ತ್ಯಾಜ್ಯದಿಂದ ತುಂಬಿಕೊಂಡಿದ್ದು, ಮಾರಕ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.

ಬಸ್ ನಿಲ್ದಾಣದಲ್ಲಿ ಕುಡುಕರು ಮದ್ಯ ಸೇವನೆ ಮಾಡುತ್ತಿದ್ದು, ಅಲ್ಲಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು ಕಂಡು ಬಂದಿವೆ. ದಿನ ಕಳೆದಂತೆ ಬಸ್ ನಿಲ್ದಾಣವು ಕುಡುಕರ ತಾಣವಾಗಿ ಮಾರ್ಪಾಡುತ್ತಿದೆ. ಹಾಗಾಗಿ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

ಇಲ್ಲಿ ನೆಲೆ ಕಂಡಿರುವ ವಲಸೆ ಕಾರ್ಮಿಕರು ಗುಟ್ಕ ತಿಂದು ಅಲ್ಲಲ್ಲಿ ಉಗಿದು ಹೊಸದಾಗಿ ನಿರ್ಮಿಸಲಾದ ಬಸ್ಸು ನಿಲ್ದಾಣದ ಅಂದವನ್ನು ಕೆಡಿಸಿದ್ದಾರೆ. ಕಸ ತ್ಯಾಜ್ಯಗಳ ರಾಶಿಯೇ ಬಿದ್ದುಕೊಂಡಿದೆ. ಇಲ್ಲಿ ಕಸ ತ್ಯಾಜ್ಯಗಳ ವಿಲೇವಾರಿಯು ಸರಿಯಾಗಿ ನಡೆಯುತ್ತಿಲ್ಲ. ಮಾರಕ ಸೊಳ್ಳೆಗಳ ಉತ್ಪತ್ತಿಗೂ ಇಲ್ಲಿಯ ಪರಿಸರವು ಕಾರಣವಾಗಿದ್ದು, ಡೆಂಗ್ಯೂ ಮಲೇರಿಯಾ ಮುಂತಾದ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ರೋಗಪಿಡಿತರು ಇಲ್ಲಿ ಆಶ್ರಯಿಸಿಕೊಂಡಿದ್ದಾರೆ.

ಕೆಮ್ಮಿ ಉಗಳುವುದು ಕಂಡು ಬಂದಿದೆ. ಪರಿಸರದಲ್ಲಿ ಕೊರೊನಾ ಸೋಂಕು ಹರಡುವ ಅವಕಾಶವು ಇಲ್ಲಿದೆ. ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಗುಂಪು ಸೇರುತ್ತಾರೆ. ಅವರೆಲ್ಲರು ಮಾಸ್ಕ್ ಧರಿಸುವುದಾಗಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೊರೊನಾದಿಂದ ರಕ್ಷಿಸಿಕೊಳ್ಳುವ ನಿಯಮಾವಳಿಗಳು ಇಲ್ಲಿ ಪಾಲನೆಯಾಗುತ್ತಿಲ್ಲ.

ನಿಲ್ದಾಣದ ವಠಾರವು ಬಯಲು ಶೌಚಾಲಯವಾಗಿದೆ. ಎಂದು ನಾಗರಿಕ ಸಮತಿಯ ಪದಾಧಿಕಾರಿಗಳು ದೂರಿದ್ದಾರೆ. ಆದಷ್ಟು ಬೇಗ ನಗರಸಭೆ ನಿಲ್ದಾಣದ ಪರಿಸರದ ಶುಚಿತ್ವಗೊಳಿಸಬೇಕು. ಕಾವಲುಗಾರ ನೇಮಿಸಬೇಕೆಂದು ಆಗ್ರಹಿಸಿದ್ದಾರೆ.