ಮಾಹೆಯಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರ ಪ್ರಾರಂಭ

ಮಣಿಪಾಲ: ಡಿ.11 ರಂದು ಭಾರತೀಯ ಭಾಷಾ ದಿವಸ್ ಅಂಗವಾಗಿ ಮಾಹೆಯು ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಅಧ್ಯಯನ ಕೇಂದ್ರವನ್ನು ಆರಂಭಿಸಲಿದೆ. ತಮಿಳು ಕವಿ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬಹುಭಾಷಾವಾದಿ, ಚಿನ್ನಸ್ವಾಮಿ ಸುಬ್ರಮಣ್ಯ ಭಾರತಿ ಅವರ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಭಾರತೀಯ ಭಾಷೆಗಳ ಸಂಸ್ಮರಣಾರ್ಥವಾಗಿ ಯುಜಿಸಿಯು ಹೊರಡಿಸಿದ ಘೋಷಣೆಯಿಂದ ಪ್ರೇರಿತವಾಗಿ ಮಾಹೆಯಲ್ಲಿಯೂ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಕರ್ನಾಟಕದ ಭಾಷೆಗಳಾದ ಕನ್ನಡ, ತುಳು, ಕೊಂಕಣಿ, ಬ್ಯಾರಿ ಮತ್ತು ಕೊಡವ ಭಾಷೆಗಳ ಕಲಿಕೆಗೆ ಒತ್ತು ನೀಡಿ ಭಾಷಾ ವೈವಿಧ್ಯತೆಯನ್ನು ಬಳಸಿಕೊಳ್ಳುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುರಿಗಳಿಗೆ ಕೊಡುಗೆ ನೀಡುವುದು ಇದರ ಉದ್ದೇಶವಾಗಿದೆ.

ಕನ್ನಡ ಮತ್ತು ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರವನ್ನು ಮಾಹೆಯ ಭಾಷಾ ವಿಭಾಗದಡಿಯಲ್ಲಿ ಇರಿಸಲಾಗುವುದು ಮತ್ತು ಭಾಷಾ ಶಿಕ್ಷಣ, ಅನುವಾದ ಮತ್ತು ಸಾಹಿತ್ಯ ಕಲೆಗಳ ಬೋಧನೆ ಮತ್ತು ಸಂಶೋಧನಾ ಸಮೂಹಗಳ ಮೇಲೆ ಕೇಂದ್ರೀಕರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.