ಸಣ್ಣ ಉದ್ದಿಮೆದಾರರಿಗೆ ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಕೋವಿಡ್ ಸಾಲ ಯೋಜನೆ: ಯಶ್‌ಪಾಲ್ ಸುವರ್ಣ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಕೊರೊನಾ ಹಿನ್ನೆಲೆಯಲ್ಲಿ ವ್ಯವಹಾರಿಕವಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಕೋವಿಡ್ ಸಾಲ ಯೋಜನೆಯನ್ನು ಆರಂಭಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಸಣ್ಣ ಉದ್ದಿಮದಾರರು, ಸ್ವ ಉದ್ಯೋಗಿಗಳು, ಮೀನುಗಾರರು, ಕೃಷಿಕರು, ಕ್ಷೌರಿಕರು, ಬೀದಿ ಬದಿ ವ್ಯಾಪಾರಸ್ಥರು, ಗೂಡಾಂಗಡಿ, ಹೊಟೇಲ್ ಉದ್ಯಮಿಗಳು ರಿಕ್ಷಾ ಹಾಗೂ ವಾಹನ ಚಾಲಕರಿಗಾಗಿ ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಕೋವಿಡ್ ಸಾಲ ಯೋಜನೆಯನ್ನು ರೂಪಿಸಿದ್ದು, ಗರಿಷ್ಠ ₹2 ಲಕ್ಷ ಸಾಲವನ್ನು ವಾರ್ಷಿಕ ಶೇ. 8.8ಬಡ್ಡಿದರದಲ್ಲಿ ಪಡೆಯಬಹುದಾಗಿದೆ.

ಈ ಯೋಜನೆಯಲ್ಲಿ ಗ್ರಾಹಕರು ಪಡೆದ ಸಾಲವನ್ನು ದಿನವಹಿ ಸಂಗ್ರಹಣೆಯ ಮೂಲಕ ಪಾವತಿಸಬೇಕಾಗಿದ್ದು, ಈ ಯೋಜನೆಯ ಮೂಲಕ 10 ಸಾವಿರ ಅರ್ಹ ಗ್ರಾಹಕರಿಗೆ ಸಾಲ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಹಾಲಕ್ಷ್ಮೀ ಬ್ಯಾಂಕಿನ ಶಾಖೆಗಳನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.