ಕುಂದಾಪುರ: ಸರ್ಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳ ತಂಡ

kundapura
ಕುಂದಾಪುರ : ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳ ತಂಡ ಕೋವಿಡ್-19 ಕುರಿತು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮ ಹಾಗೂ ನಿಯಮಾವಳಿಗಳ ಅನುಷ್ಠಾನದ ಪರಿಶೀಲನೆ ನಡೆಸಿದರು.
ಪುರಸಭೆ, ತಹಶೀಲ್ದಾರ್ ಕಚೇರಿ ಹಾಗೂ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್ ಪಿ ಭಾಸ್ಕರ್ ರೆಡ್ಡಿಯವರ ನೇತ್ರತ್ವದ ತಂಡ ಕೋವಿಡ್ -19 ನಿಯಮಾವಳಿಗಳ ಪಾಲನೆಯ ಪರಿಶೀಲನೆ ನಡೆಸಿದರು. ಮಾಸ್ಕ್ ಧರಿಸಿ ಕೆಲಸ ನಿರ್ವಹಿಸುವಂತೆ ಸೂಚಿಸಿದ ಅವರು, ಥರ್ಮಲ್ ಸ್ಕ್ಯಾನರ್ ಅಳವಡಿಸದೆ ಇರುವ ಹಾಗೂ ಕಚೇರಿಗೆ ಭೇಟಿ ನೀಡಿದ ಪ್ರತಿಯೊಬ್ಬರ ಮಾಹಿತಿಯನ್ನು ದಾಖಲಿಸದೆ ಇರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭೇಟಿ ಹಾಗೂ ಪರಿಶೀಲನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಲೋಕಾಯುಕ್ತ ಡಿವೈಎಸ್ ಪಿ ಭಾಸ್ಕರ್ ರೆಡ್ಡಿ, ಜೀವ ಮತ್ತು ಜೀವನವನ್ನು ಒಟ್ಟಿಗೆ ಮುನ್ನೆಡಿಸಿಕೊಂಡು ಹೋಗಬೇಕು. ಕೊರೊನಾ ಬಗ್ಗೆ ಇರಬೇಕಾದ ಜವಾಬ್ದಾರಿ ಕಾಣಿಸುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಧರಿಸುವವರ ಪ್ರಮಾಣ ಕಡಿಮೆ ಇದೆ. ಹೆಚ್ಚಿನ ಕಡೆ  ಥರ್ಮಲ್ ಸ್ಕ್ಯಾನರ್ ಹಾಗೂ ಭೇಟಿ ನೀಡಿದವರ ನೊಂದಣೆ ಪುಸ್ತಕ ಇಲ್ಲ. ಈ ಲೋಪಗಳನ್ನು ಸರಿ ಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
65 ವರ್ಷ ಮೇಲ್ಪಟ್ಟವರನ್ನು ಹೆಚ್ಚು ಹೊತ್ತು ಕಾಯಿಸದಂತೆ, ತಹಶೀಲ್ದಾರ್ ಕಚೇರಿಯಲ್ಲಿ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದ ಸಿಬ್ಬಂದಿಗಳಿಗೆ ಮೆಮೋ ನೀಡಲು ಹಾಗೂ ಹೋಟೆಲ್ ಗಳಲ್ಲಿ ಸ್ಟೀಲ್ ತಟ್ಟೆ ಲೋಟವನ್ನು  ಉಪಯೋಗಿಸುತ್ತಿರುವ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.