ಉಡುಪಿ: ಕೋವಿಡ್ ಎರಡನೇ ಅಲೆಯಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಮಾಲೀಕರು ಹಾಗೂ ನೌಕರರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಈ ಸಂಕಷ್ಟದ ಮಧ್ಯೆಯೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ನಲ್ಲಿ ಹೋಟೆಲ್ ನೌಕರರು, ಮಾಲೀಕರನ್ನು ಪರಿಗಣಿಸದೆ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಹೋಟೆಲ್, ಸಣ್ಣ ಕ್ಯಾಂಟೀನ್, ಗೂಡಾಂಗಡಿ ಹಾಗೂ ರೆಸ್ಟೋರೆಂಟ್ಗಳಿಗೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮ ಮುಂದುವರಿಸಿಕೊಂಡು ಹೋಗುವುದು ಬಹುದೊಡ್ಡ ಸವಾಲಾಗಿದೆ. ಬ್ಯಾಂಕುಗಳ ಸಾಲ, ನೌಕರರ ಸಂಬಳ, ಬಾಡಿಗೆ ಮತ್ತು ನಿರ್ವಹಣೆ ವೆಚ್ಚದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಅವಕಾಶ ಕೊಟ್ಟಿರುವ ಶೇ.20ರಷ್ಟು ಪಾರ್ಸೆಲ್ ವ್ಯಾಪಾರದಿಂದ ಉದ್ಯಮ ನಡೆಸಲು ಸಾಧ್ಯವಿಲ್ಲ.
ಸಾವಿರಾರು ಹೋಟೆಲ್ ನೌಕರರು ಕೆಲಸವಿಲ್ಲದೆ ಅತಂತ್ರರಾಗಿದ್ದು, ಅವರನ್ನು ಕಾರ್ಮಿಕರಂತೆ ಪರಿಗಣಿಸಿ ಸರ್ಕಾರ ಆರ್ಥಿಕ ಸಹಾಯಧನ ಮಾಡಬೇಕು. ಹೋಟೆಲ್ ಮಾಲೀಕರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.












