ಬೈಲಕೆರೆ ವನಿತಾ ರೊಡ್ರಿಗಸ್ ಸಂಶಯಾಸ್ಪದ ಸಾವಿನ ಕುರಿತು ಸಮಗ್ರ ತನಿಖೆಗೆ ಸ್ಥಳೀಯರ ಆಗ್ರಹ

ಉಡುಪಿ: ಕಳೆದ ಡಿ. 31 ರಂದು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಬೈಲಕೆರೆ ನಿವಾಸಿ 32 ವರ್ಷದ ವನಿತಾ ರೊಡ್ರಿಗಸ್ ಅವರ ಸಾವಿನ ಬಗ್ಗೆ ಸೂಕ್ತವಾದ ತನಿಖೆ ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ವನಿತಾ ರಾಡ್ರಿಗಸ್ ಡಿ. 28 ರಂದು ಹಟ್ಟಾತ್ ಅನಾರೋಗ್ಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆ ಫಲಕಾರಿಯಾಗದೆ ಡಿ 31 ರಂದು ಮೃತರಾಗಿದ್ದು, ಕೋವಿಡ್ ಲಸಿಕೆ ಪಡೆದ‌ ಹಿನ್ನಲೆಯಲ್ಲಿ ಮೃತರಾಗಿದ್ದಾರೆ ಎಂದು ಮೃತರ ಗಂಡ ಸುಳ್ಳು ಪ್ರಚಾರ ನಡೆಸಿದ್ದರು. ಆದರೆ ವನಿತಾರಿಗೆ ಅವರ ಗಂಡ ಹಲವಾರು ಬಾರಿ ಹಲ್ಲೆ ನಡೆಸಿ‌ದ್ದರು. ಈ ಬಗ್ಗೆ ಪೋಲಿಸರಿಗೂ ದೂರು ನೀಡಿದ್ದಾರೆ ಎಂದು ನೆರೆ ಮನೆಯ ನಿವಾಸಿಗಳು ಆರೋಪಿಸಿದ್ದಾರೆ.

ಈ ಸಾವಿನ‌ ಬಗ್ಗೆ ಹಲವಾರು ಸಂಶಯಗಳಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬೈಲಕೆರೆ ನಿವಾಸಿಗಳು ಮಲ್ಪೆ‌ ಠಾಣೆಗೆ ಇಂದು ಮನವಿ ಸಲ್ಲಿಸಿದರು.

ನಿಯೋಗದಲ್ಲಿ ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಅರುಣ್ ಜತ್ತನ್ನ ಹಾಗೂ ಸದಸ್ಯರುಗಳು, ತೆಂಕನಿಡಿಯೂರು ಸಂಜೀವಿನಿ ಸಂಘದ‌ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಹಾಗೂ ಸಂಘದ ಸದಸ್ಯರು, ಬೈಲಕೆರೆ ಅಂಗನವಾಡಿ ಶಿಕ್ಷಕಿ ಸುನೀತ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಬೈಲಕೆರೆ ಸಮಸ್ತ ನಾಗರೀಕರು ಇದ್ದರು‌.