ಮದ್ಯದ ದೊರೆ ‘ವಿಜಯ್ ಮಲ್ಯ’ ದಿವಾಳಿ: ಲಂಡನ್ ಹೈಕೋರ್ಟ್ ಘೋಷಣೆ

ಲಂಡನ್​: ಉದ್ಯಮಿ‌ ವಿಜಯ್ ಮಲ್ಯ ಹಾಗೂ ಭಾರತೀಯ ಬ್ಯಾಂಕ್​ಗಳ ನಡುವಿನ ಕಾನೂನು ಹೋರಾಟದಲ್ಲಿ ಕಡೆಗೂ ಭಾರತೀಯ ಬ್ಯಾಂಕ್​ಗಳ ಒಕ್ಕೂಟಕ್ಕೆ ದೊಡ್ಡಮಟ್ಟದ ಗೆಲುವು ಸಿಕ್ಕಿದೆ.

ಉದ್ಯಮಿ ವಿಜಯ್ ಮಲ್ಯ ಅವರು ದಿವಾಳಿಯಾಗಿದ್ದಾರೆ ಎಂದು ಲಂಡನ್ ಹೈಕೋರ್ಟ್​​ ಸೋಮವಾರ ಘೋಷಣೆ ಮಾಡಿದೆ.
ಇದರಿಂದ ಭಾರತೀಯ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿ ಹೊರ ದೇಶಕ್ಕೆ ಪರಾರಿಯಾಗಿ ಲಂಡನ್ ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಅವರಿಗೆ ಇದೀಗ ಭಾರೀ ಹಿನ್ನೆಡೆಯಾಗಿದೆ.‌

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸಹಭಾಗಿತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟವು ಇದೀಗ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ನೀಡಿದ ಸಾಲದಿಂದ ಹಣ ವಸೂಲು ಮಾಡಲು ಸಹಕಾರಿಯಾಗಲಿದೆ.
ಇನ್ನು ವಿಜಯ್ ಮಲ್ಯ ಅವರು ಲಂಡನ್​ ಹೈಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆದರೆ ಅದಕ್ಕೆ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.