ದಲಿತರಿಗೆ ಕಾಂಗ್ರೆಸ್ ಏನು ಮಾಡಿದೆಯೆಂದು ಮೊದಲು ತಿಳಿಸಲಿ, ಬಳಿಕ ಬಿಜೆಪಿಯ ತಾಕತ್ ಬಗ್ಗೆ ಪ್ರಶ್ನಿಸಲಿ: ನಳಿನ್ ಕುಮಾರ್ ಕಟೀಲ್

ಉಡುಪಿ: ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿ ಮುಖ್ಯಮಂತ್ರಿ ಆಗಿದ್ದರು. ಆದರೆ, ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ಅವರನ್ನು ಸಿಎಂ ಮಾಡಲು ಹಗಲಿರುಳು ಶ್ರಮಿಸಿದ ಡಾ. ಜಿ. ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆರನ್ನು ಮೂಲೆ ಗುಂಪು ಮಾಡಿ, ದಲಿತ ಮುಖ್ಯಮಂತ್ರಿ ಚರ್ಚೆಯನ್ನೇ ಮುಚ್ಚಿಹಾಕಿದರು. ಹೀಗಿರುವಾಗ ಸಿದ್ದರಾಮಯ್ಯ ಅವರು ಬಿಜೆಪಿಗೆ ತಾಕತ್ ಇದ್ದರೆ ದಲಿತರನ್ನು ಸಿಎಂ ಮಾಡಿ ಎನ್ನುವುದು ಎಷ್ಟು ಸರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಪರ್ಕಳದ ಸಣ್ಣಕ್ಕಿಬೆಟ್ಟುವಿನಲ್ಲಿ ಇಂದು ನಡೆದ ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ‌ ಕೃಷಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಗೆ ಕಾಂಗ್ರೆಸ್ ನಷ್ಟು ದೀರ್ಘಕಾಲದ ಅಧಿಕಾರ ಸಿಕ್ಕಿಲ್ಲ. ವಾಜಪೇಯಿ ಸರ್ಕಾರ ಇದ್ದಂತಹ ವೇಳೆ ಅಬ್ದುಲ್ ಕಲಾಂ ಅವರಂತಹ ಶ್ರೇಷ್ಠ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಗೋವಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಕಾಂಗ್ರೆಸ್ ದಲಿತರಿಗಾಗಿ ಏನು ಮಾಡಿದೆ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಳಿನ್‌ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.