ರಾಜ್ಯದಲ್ಲಿ ಜೂನ್ 14ರ ವರೆಗೆ ಲಾಕ್ ಡೌನ್ ಮುಂದುವರಿಕೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈ‌ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಕಟ್ಟುನಿಟ್ಟಿನ ಮಾರ್ಗಸೂಚಿಯೊಂದಿಗೆ ಜೂನ್ 14ರ ವರೆಗೆ ಲಾಕ್​​​ಡೌನ್​ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೊರೊನಾ ಸರಪಳಿಯನ್ನು ಇನ್ನೂ ಸಂಪೂರ್ಣವಾಗಿ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ, ಹಳ್ಳಿಗಳಲ್ಲಿಯೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಆದ್ದರಿಂದ ಒಂದು ವಾರ ಕಾಲ ಲಾಕ್​​ಡೌನ್​ ಮುಂದುವರಿಯುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಹೋಟೆಲ್ ಗಳಿಗೆ ರಿಲೀಫ್:
ಹೋಟೆಲ್ ಗಳಿಗೆ ಸಂಜೆ 7ರ ವರೆಗೆ ಪಾರ್ಸೆಲ್ ನೀಡಲು ಅವಕಾಶ ನೀಡಲಾಗಿದೆ. ಅಲ್ಲದೆ, ಇಂದಿನಿಂದಲೇ (ಜೂನ್ 3) ಕೈಗಾರಿಕೆಗಳಿಗೆ ರಫ್ತು ಮಾಡಲು ಅನುಮತಿ ನೀಡಲಾಗಿದೆ.
ಇದೇ ವೇಳೆ 500 ಕೋಟಿಗಳ 2ನೇ ಪ್ಯಾಕೇಜ್ ಘೋಷಣೆ ಮಾಡಿದರು.