ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕುಂದಾಪುರವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಯುವಮೆರಿಡಿಯನ್ ಸಾಧನೆ ಶ್ಲಾಘನೀಯ: ಶೈನ್ ಶೆಟ್ಟಿ

ಕುಂದಾಪುರ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕುಂದಾಪುರವನ್ನು ಉನ್ನತ ದರ್ಜೆಗೇರಿಸುವ ಮೂಲಕ ರಾಷ್ಟ್ರ ಮತ್ತು ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಯುವಮೆರಿಡಿಯನ್ ಮುಖ್ಯಸ್ಥರಾದ ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ ಕಾರ್ಯ ಶ್ಲಾಘನೀಯ ಎಂದು ಸೀಸನ್ 7 ಬಿಗ್ ಬಾಸ್ ನ ವಿಜೇತ ಶೈನ್ ಶೆಟ್ಟಿ ಹೇಳಿದರು.

ಅವರು ಮಾರ್ಚ್ 7ರಂದು ಸಂಜೆ ಯುವಮೆರಿಡಿಯನ್ ಸ್ವಿಮ್ ಸ್ಲೈಡ್ ಎಂಡ್ ಸ್ಪ್ಲಾಶ್ ಅಮ್ಯೂಸ್‍ಮೆಂಟ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು.

ಹಲವು ವಿಶಿಷ್ಟ ಸೇವೆಗಳ ಮೂಲಕ ಕುಂದಾಪುರದ ಹೆಸರನ್ನು ಉತ್ತುಂಗಕ್ಕೇರಿಸಿದ ಉದಯಕುಮಾರ್ ಶೆಟ್ಟಿ ಹಾಗೂ ವಿನಯ ಕುಮಾರ್ ಶೆಟ್ಟಿ ಸಾರಥ್ಯದ ಯುವಮೆರಡಿಯನ್ ಸಮೂಹ ಸಂಸ್ಥೆಯ ಯಶಸ್ಸಿನ ಕಿರೀಟಕ್ಕೆ ಅಮ್ಯೂಸ್‍ಮೆಂಟ್ ಪಾರ್ಕ್ ಎನ್ನುವ ಹೊಸ ಗರಿ ಸೇರಿಕೊಂಡಿದೆ. ಇನ್ನು ಹೆಚ್ಚು ಸಾಧನೆಗಳ ಮೂಲಕ ಕುಂದಾಪುರವನ್ನು ಅಭಿವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಹಾಗೇಯೆ ಬಿಗ್ ಬಾಸ್ ಸ್ಪರ್ಧಿ ಚಂದನಾ ಕುಂದಾಪುರ ಭಾಷೆಯ ಹಾಡನ್ನು ಹಾಡಿ ಜನಮನ ಸೆಳೆದರು. ಭೂಮಿಕಾ ಶೆಟ್ಟಿ ಕುಂದಾಪುರದಲ್ಲಿ ಕಳೆದ ಬಾಲ್ಯವನ್ನು ನೆನಪಿಸಿಕೊಂಡರು. ವಾಸುಕಿ ವೈಭವ್, ದೀಪಿಕಾದಾಸ್ ಅತಿಥಿಗಳಾಗಿ ಆಗಮಿಸಿದ್ದರು. ಬಳಿಕ ವಿಸ್ಮಯ ಜಾದೂ ತಂಡದ ಗಣೇಶ್ ಕುದ್ರೋಳಿಯವರಿಂದ ವಿಶೇಷ ಜಾದೂ ಕಾರ್ಯಕ್ರಮ ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಅಮ್ಯೂಸ್ ಮೆಂಟ್ ಪಾರ್ಕಿನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.