ಕುಂದಾಪುರ:ದಲಿತ ಮುಖಂಡನ ನಿಂದನೆ ಖಂಡಿಸಿ ದ.ಸಂ.ಸ ವತಿಯಿಂದ ಪ್ರತಿಭಟನೆ

ಕುಂದಾಪುರ: ಮೂಲ ನಿವಾಸಿಗಳ ಹೆಸರಲ್ಲಿ ಪತ್ರಿಕಾ ಪ್ರಚಾರ ಪಡೆದು ಬಿಳಿ ಅಂಗಿ ಧರಿಸಿ ಶೋಕಿ ಮಾಡುತ್ತಾರೆ ಎಂದು ದಲಿತ ಮುಖಂಡ ವಾಸುದೇವ ಮುದೂರು ಅವರನ್ನು ಜಡ್ಕಲ್ ಗ್ರಾಪಂ ಅಧ್ಯಕ್ಷರು ನಿಂದಿಸಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಡ್ಕಲ್ ಗ್ರಾಮಪಂಚಾಯತಿ ಎದುರು ಸೋಮವಾರ ಬೆಳಿಗ್ಗೆ ಜಮಾಯಿಸಿ ಆಕ್ರೋಷ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಭಟನೆ ನಡೆಸಲು ಮುಂದಾದ ದಲಿತ ನಾಯಕರನ್ನು ಮನವೊಲಿಸಿಸಲು ಖುದ್ದು ಕುಂದಾಪುರ ಡಿವೈಎಸ್ಪಿ ಬಿ.ಪಿ, ದಿನೇಶ್ ಕುಮಾರ್ ಗ್ರಾ.ಪಂ.ಗೆ ದೌಡಾಯಿಸಿ ದಲಿತ ಮುಖಂಡರ ಬಳಿ ಮಾತುಕತೆ ನಡೆಸಿದ್ದು ಬಳಿಕ ಗ್ರಾ.ಪಂ ಸಭಾಂಗಣದಲ್ಲಿ ಡಿವೈಎಸ್ಪಿ ನೇತ್ರತ್ವದಲ್ಲಿ ದಲಿತರ ಸಭೆ ನಡೆಸಲಾಯಿತು.

ಸಭೆಯ ಮೊದಲಿಗೆ ದಲಿತ ಮುಖಂಡ, ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ಕೆಲವೆಡೆಗಳಲ್ಲಿ ಮೂಲಸೌಕರ್ಯ ವಂಚಿತರಾದ ಕೊರಗ ಸಮುದಾಯದವರ ಅನುಕೂಲಕ್ಕಾಗಿ ಅವರಿಗೆ ಸಹಕಾರ ಮಾಡಲು ಬರುವ ದಲಿತ ಮುಖಂಡರಿಗೆ ಅಧಿಕಾರದಲ್ಲಿದ್ದವರು ಮತ್ತು ಜನಪ್ರತಿನಿಧಿಯಾದವರು ಸಹಕಾರ ನೀಡಲು ತೆರಳುವ ಸಮುದಾಯದ ಪ್ರತಿನಿಧಿಗಳನ್ನು ಪ್ರೋತ್ಸಾಹ ನೀಡಿ ಬಡವರಿಗೆ ಬದುಕು ಕಲ್ಪಿಸಬೇಕು ಹೊರತು ಅವಮಾನ ಮಾಡಿ ಅವರನ್ನು ಕುಗ್ಗಿಸುವ ಕೆಲಸ ಮಾಡುವುದು ಸರಿಯಲ್ಲ. ನಮ್ಮ ಕೈಯಲ್ಲಾದ ಪರೋಪಕಾರಿ ಕೆಲಸಗಳನ್ನು ನಾವು ಮಾಡುತ್ತಿದ್ದು ಇದಕ್ಕೆ ಸ್ಥಳಿಯ ಗ್ರಾ,ಪಂ ಪ್ರತಿನಿಧಿಗಳು ಅಡ್ಡಗಾಲು ಹಾಕುವುದು ತರವಲ್ಲ ಎಂದರು.

ಜಡ್ಕಲ್ ಗ್ರಾ.ಪಂ ಅಧ್ಯಕ್ಷ ಅನಂತಮೂರ್ತಿ ಮಾತನಾಡಿ, ಸಂಘಟನೆ ವಿಚಾರದಲ್ಲಿ ಯಾವುದೇ ನಿಂದನೆ ಮಾಡಿಲ್ಲ. ವೈಯಕ್ತಿಕ ನಿಂದನೆಯನ್ನೂ ಮಾಡಿಲ್ಲ, ನನ್ನ ವಾದ ವಿವಾದಗಳಿಂದ ಸಂಘಟನೆಗೆ ಬೇಸರವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಗ್ರಾ.ಪಂ ಗೆ ಬರುವ ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಕೊಡಿಸುವ ಕಾರ್ಯ ಮಾಡಿತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಮಾತನಾಡಿದರು.

ಈ ವೇಳೆಯಲ್ಲಿ ಮಾತನಾಡಿದ ಡಿವೈಎಸ್ಪಿ ಬಿ.ಪಿ ದಿನೇ ಕುಮಾರ್, ದಲಿತ ಸಂಘರ್ಷ ಸಮಿತಿಯವರು ಸಮಾಜದಲ್ಲಿ ತುಳಿತಕ್ಕೊಳಗಾದ, ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿಯಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳು ಹಾಗೂ ವ್ಯವಸ್ಥೆಯಲ್ಲಿರುವವರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ಥಳಿಯ ವಾಟಿಗುಂಡಿ ಕೊರಗರ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಸಮಾಜಮುಖಿಯಾಗಿ ಬೆಳಕು ಚೆಲ್ಲಿದ್ದು ಅದನ್ನು ಗ್ರಾ.ಪಂ ವ್ಯವಸ್ಥೆಗೆ ತಳುಕು ಹಾಕಿಸಿಕೊಂಡು ತಪ್ಪು ಅರ್ಥೈಸಿ ವೈಯಕ್ತಿಕ ನಿಂದನೆ ಮಾಡಿದ್ದರೆ ಅದು ಸರಿಯಲ್ಲ. ತಪ್ಪು ಕಲ್ಪನೆಯ ಈ ವಿಚಾರವನ್ನು ಇಲ್ಲಿಯೇ ಬಿಟ್ಟು ಸಮಾಜಮುಖಿ ಚಿಂತನೆಯನ್ನು ಮುಂದುವರಿಸೋಣ ಎಂದರು.