ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವಿದೇಶದಲ್ಲಿರುವವರನ್ನು ವಾಪಾಸ್ ಕರೆಯಿಸಿಕೊಳ್ಳಿ: ಗೋಪಾಲ ಪೂಜಾರಿ

ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯರ್ತೆಯರ ಹಗಲು-ರಾತ್ರಿ ನಿರಂತರ ಶ್ರಮದಿಂದಾಗಿ ಇಂದು ಉಡುಪಿ ಕೊರೋನಾ ನಿಯಂತ್ರಣದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಜಿಲ್ಲಾಡಳಿತ ಈ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಶುಕ್ರವಾರ ಹೆಮ್ಮಾಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕುಟುಂಬ ನಿರ್ವಹಣೆಗಾಗಿ ಊರು ಬಿಟ್ಟು ಮುಂಬೈ, ಬೆಂಗಳೂರು, ಹೈದರಾಬಾದ್, ದುಬೈ ಮುಂತಾದೆಡೆಗಳಲ್ಲಿ ನಲೆಸಿದ ಯುವಕರು ಇಂದು ಅತಂತ್ರರಾಗಿದ್ದಾರೆ. ಅವರನ್ನು ನಾವು ವಾಪಾಸ್ ಕರೆಸಿಕೊಳ್ಳಲೇಬೇಕಾದ ಜವಾಬ್ದಾರಿ ಸರ್ಕಾರದ್ದು. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಏನೂ ತೊಂದರೆಗಳಾಗದಂತೆ ಯುವಕರನ್ನು ಶೀಘ್ರವೇ ವಾಪಾಸ್ ಕರೆಸಿಕೊಳ್ಳಲಿ ಎಂದು ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ.

ಹೊರ ರಾಜ್ಯ ಹಾಗೂ ವಿದೇಶದಲ್ಲಿರುವವರು ಬಹುತೇಕರು ಮೂವತ್ತರಿಂದ ಮೂವತ್ತೈದು ವರ್ಷ ಪ್ರಾಯದ ಯುವಕರು. ಈಗಾಗಲೇ ಬೇರೆಡೆಗಳಲ್ಲಿರುವ ಯುವಕರನ್ನು ಊರಿಗೆ ಕರೆಸಿಕೊಳ್ಳುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಹೊರರಾಜ್ಯಗಳಿಂದ ಬಂದ ಯುವಕರು ಮನೆಗೆ ನೇರ ಹೋಗದೆ ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ನಲ್ಲಿರಬೇಕು. ಮನೆಯಲ್ಲಿರುವ ವೃದ್ದರ ಮೇಲೆ ಆದಷ್ಟು ನಿಗಾ ವಹಿಸಬೇಕು ಎಂದು ಅವರು ಹೇಳಿದರು.

ಒಂದೆಡೆ ಉದ್ಯೋಗವಿಲ್ಲ, ಇನ್ನೊಂದೆಡೆ ಅಗತ್ಯ ವಸ್ತುಗಳ ದರ ಗಗನಕ್ಕೇರುತ್ತಿದೆ. ಇಂತಹ ಸಮಯದಲ್ಲಿ ಸರ್ಕಾರದ ಬೊಕ್ಕಸವನ್ನು ತುಂಬಿಸಲು ಪೆಟ್ರೋಲ್, ಡೀಸೆಲ್ ದರ ಏರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಜನರು ಮನೆಯಲ್ಲಿದ್ದು, ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರದ ಈ ನಡೆಯಿಂದಾಗಿ ಜನಸಾಮನ್ಯರಿಗೆ ಗಾಯದ ಮೇಲೇ ಇನ್ನಷ್ಟು ಬರೆ ಎಳೆದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಒಂದೊಂದು ಉದ್ಯಮಗಳ ಹಿಂದೆ ಸಾವಿರಾರು ಕುಟುಂಬಗಳ ನಿರ್ವಹಣೆಯಾಗುತ್ತಿದೆ. ಇಂದು ಎಲ್ಲಾ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಬ್ಯಾಂಕ್‌ಗಳಲ್ಲಿ ಸಾಲಾ ಮಾಡಿಕೊಂಡು ಉದ್ಯಮ ನಡೆಸುತ್ತಿರುವ ಸಾಕಷ್ಟು ಯುವಕರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಟೇಲ್ ಉದ್ಯಮವೂ ಸಂಪೂರ್ಣ ನೆಲಕಚ್ಚಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮುಂದೆ ಬಂದು ಉದ್ಯಮಿಗಳು ಹಾಗೂ ಕಾರ್ಮಿಕರ ರಕ್ಷಣೆಗೆ ನಿಲ್ಲಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳಲಿದೆ ಎಂದು ಗೋಪಾಲ ಪೂಜಾರಿ ಕಳವಳ ವ್ಯಕ್ತಪಡಿಸಿದರು.