ಕುಂದಾಪುರ: ಕೊರೋನಾ ವೈರಸ್ ಹರಡದಂತೆ ಜನಜಾಗೃತಿಯ ಮೈಕ್ ಪ್ರಚಾರಕ್ಕೆ ಚಾಲನೆ

ಕುಂದಾಪುರ: ಕೊರೋನಾ ಮುಕ್ತ ಭಾರತ ಆಗಬೇಕಿದ್ದರೆ ಸರ್ಕಾರ ಹೊರಡಿಸುವ ಎಲ್ಲಾ ಆದೇಶಗಳನ್ನು ಪ್ರಜೆಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಪ್ರಧಾನಮಂತ್ರಿ, ಮುಖ್ಯಮಂತ್ರಿಯವರು ಕೊರೋನಾ ಜನಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಆದೇಶ ನೀಡಿದ್ದಾರೆ. ಕೊರೋನಾ ತಡೆಗಟ್ಟಲು ತಾಲೂಕು ಆಡಳಿತ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದು ಸಹಾಯಕ ಆಯುಕ್ತ ರಾಜು ಕೆ ಹೇಳಿದರು.

ಅವರು ಶನಿವಾರ ಇಲ್ಲಿನ ಮಿನಿವಿಧಾನಸೌಧದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಧ್ವನಿ ಮತ್ತು ಬೆಳಕು ಸಂಯೋಜಕರ ಸಂಘಟನೆ ಕುಂದಾಪುರ ವಲಯದ ಸಹಭಾಗಿತ್ವದಲ್ಲಿ ಕೊರೋನಾ ವೈರಸ್ ಹರಡದಂತೆ ನಡೆಸುತ್ತಿರುವ ಜನಜಾಗೃತಿಯ ಮೈಕ್ ಪ್ರಚಾರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದುವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸುಗಳಿಲ್ಲ. ಕರ್ನಾಟಕದಲ್ಲೂ ಶುಕ್ರವಾರ ಕೊರೋನಾ ಕೇಸು ದಾಖಲಾಗಿಲ್ಲ. ನಾವು ಸಾಕಷ್ಟು ನಿಯಂತ್ರಣದಲ್ಲಿದ್ದೇವೆ. ಜನರೆಲ್ಲರೂ ಆರೋಗ್ಯ ಇಲಾಖೆ ನೀಡುವ ಮುಂಜಾಗೃತ ಕ್ರಮಗಳನ್ನು ಪಾಲಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಕರೆ ನೀಡಿರುವ ಜನತಾ ಕರ್ಫ್ಯೂಗೆ ಎಲ್ಲರೂ ಸಹಕರಿಸಿಬೇಕು ಎಂದರು.

ನಮಗೆ ಎಲ್ಲರ ಆರೋಗ್ಯವೂ ಮುಖ್ಯ. ಸಾರ್ವಜನಿಕ ಕಚೇರಿಗಳಿಗೆ ಹೆಚ್ಚೆಚ್ಚಾಗಿ ಬರಬೇಡಿ. ತುರ್ತು ಕಾರ್ಯಗಳಿದ್ದರೆ ಮಾತ್ರ ಕಚೇರಿಗೆ ಬನ್ನಿ. ಬಹುತೇಕ ಮನೆಯಲ್ಲಿದ್ದು ಮಹಾಮಾರಿ ಕೊರೋನಾ ವೈರಸ್ ತೊಲಗಿಸಲು ಕೈಜೋಡಿಸಿ ಎಂದು ಸಹಾಯಕ ಆಯುಕ್ತ ರಾಜು ಕೆ ಮನವಿ ಮಾಡಿಕೊಂಡರು.

ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಪ್ರಸ್ತಾಪಿಸಿ ಸ್ವಾಗತಿಸಿದರು. ಸಂಚಾರಿ ಠಾಣೆಯ ಠಾಣಾಧಿಕಾರಿ ಸುದರ್ಶನ್, ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಧ್ವನಿ ಮತ್ತು ಬೆಳಕು ಸಂಯೋಜಕರ ಸಂಘಟನೆಯ ಗೌರವಾಧ್ಯಕ್ಷರಾದ ರಾನಿ ಬೊರೆಟ್ಟೋ, ಸತೀಶ್, ಅಧ್ಯಕ್ಷ ಸರ್ದಾರ್, ಕಾರ್ಯದರ್ಶಿ ವಿಶ್ವನಾಥ್, ರಾಜಗೋಪಾಲ್ ಶಂಕರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.