ಕಾರ್ಟೂನಿಸ್ಟರ ಇಡೀ ಬಳಗವೇ ಕುಂದಾಪುರದಲ್ ಇತ್ತ್ ಅಂದೆಳಿ ಹೇಳುಕ್ ನಂಗಂತೂ ಹೆಮ್ಮೆ:ರಿಷಬ್ ಶೆಟ್ಟಿ

ಕುಂದಾಪುರ: ನಾವೆಲ್ಲಾ ಸ್ವಲ್ಪ ಹಡಿ ಪಳ್ದಿ ಮಾಡುವರ್. ಯಾರ್‍ಯಾರೋ ಕಾಲೆಳುದ್ ಜಾಸ್ತಿ. ಹಾಂಗೈ ನಮ್ಮೂರಗ್ ಹೆಚ್ಚಿನ್ ಜನ ಕಾರ್ಟೂನಿಸ್ಟ್ ಆಪುಕ್ ಸಾಧ್ಯ ಐತ್. ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ಅಪಾರ. ಕಾರ್ಟೂನಿಸ್ಟರ ಇಡೀ ಬಳಗವೇ ಕುಂದಾಪುರದಲ್ ಇತ್ತ್ ಅಂದೆಳಿ ಹೇಳುಕ್ ನಂಗಂತೂ ಹೆಮ್ಮೆ ಅನ್ನಿಸ್ತಿದೆ..

ಕುಂದಾಪುರ ಕಾರ್ಟೂನ್ ಬಳಗ ಆಶ್ರಯದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಶನಿವಾರ ನಡೆದ ಕಾರ್ಟೂನ್ ಹಬ್ಬ ಉದ್ಘಾಟಿಸಿ ಖ್ಯಾತ ನಿದೇರ್ಶಕ ಹಾಗೂ ನಟ ರಿಷಬ್ ಶೆಟ್ಟಿ ಕುಂದಾಪುರ ಕನ್ನಡದಲ್ಲೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಪರಿಯಿದು.

ನಾವು ಹೋದಲ್ಲೆಲ್ಲಾ ನಮ್ಮ ಭಾಷೆಯನ್ನು ಕೇಳಿ ರೇಗಿಸುವವರೆ ಹೆಚ್ಚು. ನಮ್ಮ ಮಾತಿನಿಂದಲೇ ನಾವು ಎಲ್ಲರನ್ನೂ ನಗಿಸುತ್ತೇವೆ. ಹಾಗೆಯೇ ಮೊನಚಾದ ರೇಖೆಯ ಮೂಲಕ ನಮ್ಮೂರಿನ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಎಲ್ಲರನ್ನೂ ನಗಿಸುತ್ತಿದ್ದಾರೆ. ಸತೀಶ್ ಆಚಾರ್ಯ ಅವರು ರಚಿಸುವ ಕಾರ್ಟೂನುಗಳನ್ನು ಆಗಾಗೆ ನೋಡಿ ನಗುತ್ತಲೇ ಇರುತ್ತೇನೆ. ನಾವು ಬ್ರಿಟೀಷ್ ಶಿಕ್ಷಣ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಮಕ್ಕಳು ಜೀವನ ಹೇಗೆ ಎನ್ನುವುದುನ್ನು ಕಲಿಯುತ್ತಿದ್ದರು. ಆದರೆ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಇಂದು ಇಲ್ಲ. ಈ ವ್ಯವಸ್ಥೆ ಮತ್ತೆ ವಾಪಾಸಾದರೆ ಮಾತ್ರ ನಾವು ನಮ್ಮ ತನವನ್ನು ಉಳಿಸಿಕೊಳ್ಳಬಹುದು ಎಂದರು.

ಸಿನೆಮಾ ಕತೆ ಬರೆಯುವಾಗ ಜೀವನದಲ್ಲಿ ನಮ್ಮೊಂದಿಗಿದ್ದ ಪಾತ್ರಗಳನ್ನು ನಾವು ಕತೆಯಾಗಿ ತೆಗೆದುಕೊಳ್ಳಬೇಕು. ನಮ್ಮ ಕಲೆ, ಸಂಸ್ಕೃತಿ, ನಾಡು-ನುಡಿ ಇವೆಲ್ಲವನ್ನೂ ಇಟ್ಟುಕೊಂಡು ನಾವು ಹೇಳೋಕೆ ಹೊರಟಾಗ ಒಂದೊಳ್ಳೆ ಗಟ್ಟಿಯಾದ ಕತೆ ರೂಪುಗೊಳ್ಳುತ್ತದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾದಲ್ಲೂ ನನ್ನ ಜೀವನದ ಕತೆಗಳನ್ನೇ ಬಳಿಸಿಕೊಂಡು ಸಿನೆಮಾ ಮಾಡಿದ್ದೇನೆ. ಆ ಸಿನೆಮಾದಲ್ಲಿ ಬರುವ ಪ್ರವೀಣನ ಪಾತ್ರ ಅದು ನನ್ನ ಅಣ್ಣನ ಕತೆ. ಚಿಕ್ಕವನಿದ್ದಾಗ ನಾನು ಮುಮ್ಮುಟ್ಟಿಯಂತೆ ಮುಗ್ದನಾಗಿದ್ದೆ. ಇವೆಲ್ಲವನ್ನೂ ಬಳಸಿಕೊಂಡೆ ಒಂದೊಳ್ಳೆ ಸಿನೆಮಾ ಮಾಡಲು ಸಾಧ್ಯವಾಯಿತು. ನಮ್ಮ ಸುತ್ತಮುತ್ತಲೂ ನಡೆಯುವಂತಹ ವಿಚಾರಗಳನ್ನು ನಾವು ಹೆಚ್ಚು ಹೆಚ್ಚು ಗಮನಿಸುತ್ತಾ ಹೋಗಬೇಕು. ಎಲ್ಲೂ ನಮ್ಮ ತನವನ್ನು ಬಿಟ್ಟುಕೊಡಬಾರದು ಎಂದು ರಿಷಬ್ ಶೆಟ್ಟಿ ನುಡಿದರು.

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಾತನಾಡಿ, ಗಾಂಧಿಜೀ ಅವರ ಆಶಯ ಹೆಣ್ಣುಮಕ್ಕಳು ಸ್ವತಂತ್ರವಾಗಿ ಓಡಾಡಬೇಕು ಎನ್ನುವುದು. ಗಾಂಧೀಜಿ ೧೫೦ ವರ್ಷದ ನಂತರವೂ ಮಹಿಳೆಯ ಶಕ್ತಿ ಅನಾವರಣ ಕೇವಲ ೫೦ರಷ್ಟಾಗಿದೆ. ಮೀಸಲಾತಿ, ರಾಜಕೀಯ ಮೀಸಲಾತಿಯಿಂದ ಯಾರನ್ನೂ ಮೇಲೆತ್ತಲು ಸಾಧ್ಯವಿಲ್ಲ. ಮಹಿಳೆಯರ ಬಗ್ಗೆ ಸಿಂಪತಿ ಬೇಡ. ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ, ನಡುರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವ ಗಾಂಧೀಜಿಯವರ ಯೋಚನೆಗೆ ಶಕ್ತಿ ಸಿಕ್ಕಂತಾಗುತ್ತದೆ. ಮಹಿಳಾ ಶಕ್ತಿ ಅನಾವರಣವಾಗಬೇಕು. ಸ್ವಚ್ಛತೆ ಎಲ್ಲರ ಗುರಿಯಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆಯಿದ್ದು, ಅದನ್ನು ಎಚ್ಚರಿಸಿಕೊಂಡು ಸ್ವಪ್ರಯತ್ನದಿಂದ ಎದ್ದೇಳುವ ಪ್ರಯತ್ನ ಮಾಡಿದರೆ ಸಾಧನೆ ಮೆಟ್ಟಿಲೇರಲು ಸಾಧ್ಯ ಎಂದರು.

ಮಣಿಪಾಲ ಗಾಂಧೀಜಿ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ. ವರದೇಶ ಹಿರೇಗಂಗೆ, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿದರು.

ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ವ್ಯಂಗ್ಯ ಚಿತ್ರ ಕಲಾವಿದರಾದ ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಸನ್ಮಾನಕ್ಕೆ ಸಹಕರಿಸಿದರು. ಪತ್ರಕರ್ತ ಅವಿನಾಶ್ ಕಾಮತ್ ಸ್ವಾಗತಿಸಿ, ನಿರೂಪಿಸಿದರು. ಹವ್ಯಾಸಿ ಕಾರ್ಟೂನಿಸ್ಟ್ ರಾಮಕೃಷ್ಣ ಹೇರ್ಳೆ ವಂದಿಸಿದರು.

ಮಾಯಾ ಕಾಮತ್ ಸ್ಮರಣಾರ್ಥ ಸ್ಪರ್ಧೆ:
ಮಧ್ಯಾಹ್ನ ಮಾಯಾ ಕಾಮತ್ ಸ್ಮರಣಾರ್ಥ ಉಡುಪಿ, ದ.ಕ. ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ಧೆ ನಡೆಯಿತು. ೫ನೇ ತರಗತಿವರೆಗಿನ ಮಕ್ಕಳಿಗೆ ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆ, ೬ ರಿಂದ ಕಾಲೇಜು ತನಕದ ಮಕ್ಕಳಿಗೆ ಗಾಂಧೀಜಿ ಈಶ್ವರ ಅಲ್ಲಾ ತೇರೋ ನಾಮ್ (ಕೋಮು ಸಾಮರಸ್ಯ) ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.

ಈ ಸಂದರ್ಭದಲ್ಲಿ ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ. ಪಿ. ವಿ. ಭಂಡಾರಿ, ವಾಗ್ಮಿ ಡಾ. ಜಯಪ್ರಕಾಶ್ ಶೆಟ್ಟಿ ಉಡುಪಿ, ಸಾಧನಾ ಕಲಾ ಸಾಂಸ್ಕೃತಿಕ ಕೇಂದ್ರ ಕುಂದಾಪುರ ನಾರಾಯಣ ಐತಾಳ್ ಇದ್ದರು. ಕ್ರಿಕೆಟ್ ತರಬೇತುದಾರ ವಿಜಯ್ ಆಳ್ವ ಬ್ರಹ್ಮಾವರ ಅವರ ಸಮ್ಮಾನಿಸಲಾಯಿತು.

ಸನ್ಮಾನ ಅಭಿನಂದನೆ:
ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ವಿದ್ಯಾರ್ಥಿಗಳೇ ವಿಶೇಷವಾಗಿ ಅಭಿನಂದಿಸಿದರು. ಕುಂದಾಪುರದ ಕನ್ನಡ ಮಾಧ್ಯಮ ನಾಲ್ಕು ಶಾಲೆ ಮಕ್ಕಳು ಬೆಳಗ್ಗೆಯೇ ತಮ್ಮ ಶಿಕ್ಷಕರ ಜೊತೆ ಕಾರ್‍ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ಕಾರ್‍ಯಕ್ರಮ ಆರಂಭವಾದ ನಂತರ ರಿಷಬ್ ಶೆಟ್ಟಿ ಅಭಿನಂದನೆ ಅವಕಾಶ ಮಾಡಿಕೊಡಲಾಯಿತು. ನಾಲ್ಕು ಶಾಲೆಗಳಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಗಮಿಸಿದ್ದು, ಒಬ್ಬ ವಿದ್ಯಾರ್ಥಿ ರಿಷಬ್ ಶೆಟ್ಟಿ ಅವರಿಗೆ ಗುಲಾಬಿ ಕೊಟ್ಟು ಅಭನಂದಿಸಿದರೆ, ಮತ್ತೊಬ್ಬ ವಿದ್ಯಾರ್ಥಿ ಶುಭಾಶಯ ಬರೆಯುವ ಮೂಲಕ ಅಭಿನಂದಿಸಿದರು. ಹಿರಿಯ ವ್ಯಂಗ್ಯ ಚಿತ್ರಗಾರರಾದ ವಿ.ಜಿ. ನರೇಂದ್ರ, ಸುರೇಂದ್ರ, ಪವರ್‌ಲಿಪ್ಟರ್ ವಿಶ್ವನಾಥ ಗಾಣಿಗ ಅವರನ್ನು ಸಮ್ಮಾನಿಸಲಾಯಿತು