ಕುಂದಾಪುರ: ಆಶಾ ಕಾರ್ಯಕರ್ತೆಗೆ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಆಶಾ ಕಾರ್ಯಕರ್ತೆಗೆ ಜೀವಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಠಾಣೆ ಪೋಲಿಸರು ಇಂದು‌ ಬಂಧಿಸಿದ್ದಾರೆ.
ಕುಂದಾಪುರದ ಸಂದೀಪ್ ಮೇಸ್ತ ಹಾಗೂ ಮಹೇಶ್ ಖಾರ್ವಿ ಬೆದರಿಕೆ ಹಾಕಿದ ಆರೋಪಿಗಳು. ಆರೋಪಿ ಸಂದೀಪ್ ಮೇಸ್ತ ಲಾಕ್ ಡೌನ್ ಉಲ್ಲಂಘಿಸಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದನು. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಆಶಾ ಕಾರ್ಯಕರ್ತೆ ಲಕ್ಷ್ಮೀ ಆತನನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಿದ್ದರು. ಆದರೆ ಸಂದೀಪ್ ಕ್ವಾರಂಟೈನ್ ಉಲ್ಲಂಘಿಸಿ ಓಡಾಡುತ್ತಿದ್ದನು. ಹಾಗಾಗಿ ಆಶಾ ಕಾರ್ಯಕರ್ತೆ ಲಕ್ಷ್ಮೀ ಮನೆಯಲ್ಲಿಯೇ ಇರುವಂತೆ ಸಂದೀಪ್ ಗೆ ಸೂಚನೆ ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಮಹೇಶ್ ಖಾರ್ವಿಯ ಜತೆಗೂಡಿ ‘ನಿನ್ನನ್ನು ಬದುಕಲು‌ ಬಿಡುವುದಿಲ್ಲ’ ಎಂದು ಆಕೆಗೆ ಜೀವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಪೊಲೀಸರು ಸಂದೀಪ್ ಹಾಗೂ‌ ಮಹೇಶ್ ನನ್ನು ಬಂಧಿಸಿದ್ದಾರೆ.