ಕುಂದಾಪುರ: ಆನಗಳ್ಳಿ ದತ್ತಾಶ್ರಮದಲ್ಲಿ ಸದ್ಯ ಸಂನ್ಯಾಸಿಗಳ ವಾಸ್ತವ್ಯ ಇಲ್ಲ

ಕುಂದಾಪುರ: ಇಲ್ಲಿಗೆ ಸಮೀಪದ ಆನಗಳ್ಳಿಯ ಶ್ರೀ ದತ್ತಾಶ್ರಮದಲ್ಲಿ ಮುಂದಿನ ತೀರ್ಮಾನದವರೆಗೆ ಸಾಧು, ಸಂತರು ಹಾಗೂ ಸಂನ್ಯಾಸಿಗಳಿಗೆ ವಾಸ್ತವ್ಯ ವ್ಯವಸ್ಥೆ ನೀಡದೆ ಇರುವ ಕುರಿತು ತೀರ್ಮಾನ ಮಾಡಲಾಗಿದೆ ಎಂದು ಆಶ್ರಮದ ಪ್ರವರ್ತಕ ಸುಭಾಶ್ ಪೂಜಾರಿ ಸಂಗಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಸೋಮವಾರದಿಂದ ದತ್ತಾಶ್ರಮದಲ್ಲಿ ಭಗವಾನ್ ನಿತ್ಯಾನಂದರ, ದತ್ತಾತ್ರೇಯರ ಹಾಗೂ ನರ್ಮದೇಶ್ವರ ಶಿವಲಿಂಗದ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ದರ್ಶನಕ್ಕಾಗಿ ದತ್ತಾಶ್ರಮಕ್ಕೆ ಬರುವವರು, ಅಂತರವನ್ನು ಕಾಯ್ದುಕೊಳ್ಳುವ ಜತೆಯಲ್ಲಿ ಸೋಂಕು ಹರಡದಂತೆ ಸರ್ಕಾರ ಸೂಚಿಸಿರುವ ಎಲ್ಲ ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.