ಕುಂದಾಪುರ: ತಾಯಿಯ ಸಾವಿನ ಸುದ್ದಿ ಕೇಳಿ ಮಗನಿಗೂ ಹೃದಯಾಘಾತ

ಕುಂದಾಪುರ: ತಾಯಿ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿದು ಕೇವಲ ಒಂದು ಗಂಟೆಯೊಳಗೆ ಮಗನೂ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಕುಂದಾಪುರದಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ.

ಇಲ್ಲಿನ ಸರ್ಕಾರಿ ತಾಲೂಕು ಆಸ್ಪತ್ರೆಯ ಬಳಿಯಲ್ಲಿನ ಮಹಾರಾಜ್ ಜುವೆಲ್ಲರ್ಸ್‍ನ ಮಾಲಿಕರಾಗಿದ್ದ ದಿ.ರಮೇಶ್ ಶೇಟ್ ಅವರ ಪತ್ನಿ ಶಕುಂತಲಾ ಶೇಟ್(82) ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಒಂದು ಗಂಟೆಯ ಅವಧಿಯಲ್ಲಿ ಅವರ ಪುತ್ರ ಪ್ರಶಾಂತ್ ಶೇಟ್(45) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶಕುಂತಲಾ ಅವರಿಗೆ 4 ಗಂಡು ಹಾಗೂ 2 ಪುತ್ರಿಯರಿದ್ದು, ಅವರು ಗಂಡು ಮಕ್ಕಳೊಂದಿಗೆ ನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಪ್ರಶಾಂತ್ 3ನೇ ಪುತ್ರರಾಗಿದ್ದು, ಅವಿವಾಹಿತರಾಗಿದ್ದರು. ಕುಂದಾಪುರದ ಜುವೆಲ್ಲರ್ಸ್ ಅಸೋಸೀಯೇಶನ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ಅವರು ಅಪಾರ ಮಿತ್ರ ವರ್ಗವನ್ನು ಹೊಂದಿದ್ದರು.

ಶನಿವಾರ ನಗರದ ಚಿಕ್ಕನ್‍ಸಾಲ್ ರಸ್ತೆಯಲ್ಲಿ ಇರುವ ಹಿಂದೂ ಸ್ಮಶಾನದಲ್ಲಿ ಬಂಧು-ಬಾಂಧವರ ಉಪಸ್ಥಿತಿಯಲ್ಲಿ ತಾಯಿ ಹಾಗೂ ಮಗನ ಮೃತ ಶರೀರದ ಅಂತ್ಯ ಸಂಸ್ಕಾರ ನಡೆಯಿತು. ಜುವೆಲ್ಲರ್ಸ್ ಅಸೋಸೀಯೇಶನ್ ಕರೆಯ ಮೇರೆಗೆ ಕುಂದಾಪುರದಲ್ಲಿ ಚಿನ್ನದ ಅಂಗಡಿಗಳು ಮೃತರ ಗೌರವಾರ್ಥವಾಗಿ ಶನಿವಾರ ವ್ಯಾಪಾರ ವಹಿವಾಟು ನಡೆಸದೆ ಬಾಗಿಲು ಮುಚ್ಚಿದ್ದವು.