ಕುಂದಾಪುರ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರ ದಾಳಿ; ದೋಣಿ, ಟಿಪ್ಪರ್ ಸಹಿತ ಓರ್ವನ ಬಂಧನ

ಉಡುಪಿ: ಅಕ್ರಮ ಮರಳು ದಂಧೆ ಅಡ್ಡೆಗೆ ದಾಳಿ ನಡೆಸಿದ ಕುಂದಾಪುರ ಪೊಲೀಸರು ಓರ್ವ ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ.

ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪ ಪಂಚಗಂಗಾವಳಿ ಹೊಳೆಯಲ್ಲಿ ಕೆಲವು ಮಂದಿ ಹೊಳೆಯಿಂದ ಮರಳು ತೆಗೆದು ದೋಣಿಗೆ ತುಂಬಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಂಜಾನಾಯ್ಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಉದಯ ಮೆಂಡನ್‌ ಎಂಬಾತನನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವ ವ್ಯಕ್ತಿ ಸುನಿಲ್‌ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಪಂಚಗಂಗಾವಳಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಶೇಖರಿಸುತ್ತಿರುವುದು ಕಂಡುಬಂದಿದೆ.

ಕೃತ್ಯಕ್ಕೆ ಬಳಸಿದ್ದ ಫೈಬರ್ ದೋಣಿ-1(ಅಂದಾಜು ಮೌಲ್ಯ-15,000/-), 1 ½ ಯುನಿಟ್ ಮರಳು(ಅಂದಾಜು ಮೌಲ್ಯ-5,000/-), KA20 C6070ನೇ 407 ಟಿಪ್ಪರ್ ವಾಹನ(ಅಂದಾಜು ಮೌಲ್ಯ-5,00,000/-) ಹಾಗೂ ಕಬ್ಬಿಣದ ಹಾರೆ-1, ಫೈಬರ ಬುಟ್ಟಿಗಳು-2 ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.