ಕುಂದಾಪುರ: ಬಸ್ ನಿರ್ವಾಹಕನ‌ ಕೊಲೆಗೆ ಯತ್ನ: ಓರ್ವನ ಬಂಧನ

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು‌ ಪೊಲೀಸರು ಬಂಧಿಸಿದ್ದಾರೆ.
ಆಲೂರು ಗ್ರಾಮದ ಪ್ರದೀಪ್ ಪೂಜಾರಿ(28) ಬಂಧಿತ ಆರೋಪಿ. ಜೂ. 2ರಂದು ಈತ ಹಾಗೂ ಇತರ ಐದು ಮಂದಿ‌ ಆಲೂರು -ಕುಂದಾಪುರ ಮಾರ್ಗದಲ್ಲಿ ಸಂಚರಿಸುವ ಜಯದುರ್ಗಾ ಬಸ್‌ಗೆ ಆಲೂರು ಗ್ರಾಮದ ಹೊಯಿಗೆಹರ ಬಸ್ ನಿಲ್ದಾಣದಲ್ಲಿ ಹತ್ತಿದ್ದಾರೆ. ಬಳಿಕ ನಿರ್ವಾಹಕ ಗಣೇಶ್ ಜೊತೆ ಜಗಳವಾಡಿ, ಅವರ ಶರ್ಟ್ ಕಾಲರ್ ಪಟ್ಟಿಯನ್ನು ಹಿಡಿದು, ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಗಣೇಶ್ ಅವರ ಎದೆಗೆ ಕಾಲಿನಿಂದ ತುಳಿದು, ಅವರ ಕೈಯಲ್ಲಿದ್ದ ಬ್ಯಾಗ್‌ನಿಂದ ಸುಮಾರು 15,700 ರೂ. ಹಣವನ್ನು ಕಸಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರು ಆರೋಪಿ ಪ್ರದೀಪ್ ನನ್ನು‌ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.