ಕುಂದಾಪುರ: ವಿದ್ಯುತ್ ತಗುಲಿ ಹತ್ತನೇ ತರಗತಿಯ ವಿದ್ಯಾರ್ಥಿ ಮೃತ್ಯು

ಕುಂದಾಪುರ: ವಿದ್ಯುತ್ ತಗುಲಿ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕುಂದಾಪುರದ ಉಪ್ಪಿನಕುದ್ರು ಗ್ರಾಮದ ಲಲಿತಾ ದುರ್ಗಾಪರಮೇಶ್ವರಿ  ದೇವಸ್ಥಾನದ ಸಮೀಪ ಶನಿವಾರ ರಾತ್ರಿ ನಡೆದಿದೆ.

ಮೃತ ಬಾಲಕನನ್ನು ಉಪ್ಪಿನಕುದ್ರು ಗ್ರಾಮದ ಗಂಗಾಧರ ಆಚಾರ್ ಅವರ ಮಗ ಧನುಷ್ (16) ಎಂದು ಗುರುತಿಸಲಾಗಿದೆ. ಈತ ಹತ್ತನೇ ತರಗತಿಯ ವಿದ್ಯಾರ್ಥಿ.

ಧನುಷ್ ಅ .17ರ ಶನಿವಾರ 8 ಗಂಟೆಗೆ ಮನೆ ಸಮೀಪದ ಶ್ರೀ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ನವರಾತ್ರಿ ಉತ್ಸವಕ್ಕೆ ತೆರಳಿದ್ದನು. 9. 30ರ ಸುಮಾರಿಗೆ ದೇವಸ್ಥಾನದ ಕಂಪೌಂಡ್ ಗೆ ಹಾಕಿದ್ದ ವಿದ್ಯುದ್ದೀಪದ ಕೇಬಲ್ ಈತನಿಗೆ ಆಕಸ್ಮಿಕವಾಗಿ ತಗುಲಿದ್ದು, ಇದರಿಂದ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದನು.

ಕೂಡಲೇ ಆತನನ್ನು ಕುಂದಾಪುರದ ವಿನಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಧನುಷ್ ವಿದ್ಯುತ್ ಶಾಕ್ ನಿಂದ  ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.