ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಕೋಟೇಶ್ವರದಿಂದ ಹೋಯ್ತು ಅದ್ಧೂರಿ ರಥ: ಕೋಟೇಶ್ವರ ಶಿಲ್ಪಿಗಳ ಕಾರ್ಯಕ್ಕೆ ಎಲ್ಲರೂ ಫಿದಾ!

-ಶ್ರೀಕಾಂತ್ ಹೆಮ್ಮಾಡಿ
ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 400 ವರ್ಷಗಳ ಇತಿಹಾಸ ಹೊಂದಿದ ಹಳೆ ಬ್ರಹ್ಮರಥದ ಮಾದರಿಯನ್ನಾಗಿಟ್ಟುಕೊಂಡು ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಟೇಶ್ವರ ಸಮೀಪದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಗುರು ಲಕ್ಷ್ಮೀನಾರಾಯಣ ಆಚಾರ್ಯ ಇವರ ನೇತೃತ್ವದಲ್ಲಿ ನಿರ್ಮಾಣಗೊಂಡ ರಥವು ಸೋಮವಾರ ಕೋಟೇಶ್ವರದಿಂದ ಕುಕ್ಕೆಯತ್ತ ಹೊರಟಿದೆ.
ಮೊದಲಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಗವದ್ವಜ ಹಾರಿಸಿ ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಡ್ಡೋಡಿ, ಬ್ರಹ್ಮರಥ ನಿರ್ಮಾಣದ ರುವಾರಿ ಮುತ್ತಪ್ಪ ರೈ ಪತ್ನಿ ಅನುರಾಧಾ ಎಂ.ರೈ ಈಡುಗಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಬಹ್ಮರಥ ಹೊರಡುವ ಮುನ್ನಾ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ಹಾಗೂ ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಕೋಟೇಶ್ವರ ಉಡುಪಿ ಮೂಲ್ಕಿ ಮಾರ್ಗವಾಗಿ ಸಂಜೆ ಮಂಗಳೂರು ಕದ್ರಿ ದೇವಸ್ಥಾನ ತಲುಪಲಿದ್ದು, ಅಲ್ಲಿಯೇ ತಂಗಿ ಬೆಳಗ್ಗೆ ಮತ್ತೆ ಪ್ರಯಾಣ ಮುಂದುವರಿಸಲಿದೆ.
ಕದ್ರಿಯಿಂದ ಕಡಬದ ವರೆಗೆ ಬ್ರಹ್ಮರಥ ಸಾಗಿ ಕಡಬದಲ್ಲಿ ತಂಗಲಿದೆ. ಕಡಬದಿಂದ ವಾಹನ ಜಾಥಾ ಮಾಗೂ ಮೆರವಣಿಗೆ ಮೂಲಕ ಸಂಜೆ ೪ಕ್ಕೆ ಬ್ರಹ್ಮರಥ ಸುಬ್ರಹ್ಮಣ್ಯಕ್ಕೆ ತಲುಪಲಿದೆ. ಕೋಟೇಶ್ವರದಿಂದ ಕುಕ್ಕೆ ಸುಬ್ರಹ್ಮಣ್ಯದ ತನಕ ಬ್ರಹ್ಮರಥ ಸಾಗಿಸುವ ವಾಹನ ವ್ಯವಸ್ಥೆ ಹಾಗೂ ಸಂಪೂರ್ಣ ವೆಚ್ಚ ಮಾಜಿ ಸಚಿವ ನಾಗರಾಜ ಶೆಟ್ಟಿ ಹಾಗೂ ಗಣೇಶ್ ಶೆಟ್ಟಿ ವಹಿಸಿಕೊಂಡಿದ್ದಾರೆ.
ಉದ್ಯಮಿ ಮುತ್ತಪ್ಪ ರೈ, ಅಜಿತ್ ಶೆಟ್ಟಿ ಕೊಡುಗೆ..
ಚಂಪಾಷ್ಠ ಸಮಯದಲ್ಲಿ ಶ್ರದ್ಧಾ ಭಕ್ತಿಂದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವ್ಯಸ್ಥೆಗೆ ತಲುಪಿತ್ತು. ಈಗಾಗಿ ದೇವಳದ ವತಿಂದ ಪ್ರಶ್ನೆ ಚಿಂತನೆ ಮಾಡಿದ ಸಂದರ್ಭ ಈ ವಿಚಾರ ತಿಳಿದ ಬಳಿಕ ನೂತನ ರಥಕ್ಕೆ ಮೂಹರ್ತ ಮಾಡಲಾಗಿತ್ತು. ಬೆಂಗಳೂರು ಬಿಡದಿ ರಿಯಾಲಿಟಿ ವೆಂಚರ್ ಪೋರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಮುತ್ತಪ್ಪ ರೈ ಹಾಗೂ ಪಾಲುದಾರ ಅಜಿತ್ ಶೆಟ್ಟಿ ಇವರ ಸಹಕಾರದೊಂದಿಗೆ ಅಂದಾಜು ಎರಡುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನೂತನ ಬ್ರಹ್ಮರಥವನ್ನು ದೇವಳಕ್ಕೆ ದಾನ ರೂಪದಲ್ಲಿ ನೀಡಲಾಗಿದೆ.
ಕಾಷ್ಠ ಶಿಲ್ಪದ ವೈಭವ:
ಶಿಲ್ಪಶಾಸ್ರ್ತದ ಪ್ರಕಾರ ಸ್ಕಂದ್ಯ ರಥದ ಮಾದರಿಯಲ್ಲೇ ರಥವನ್ನು ತಯಾರಿಸಲಾಗಿದೆ. ಹಳೆಯ ರಥದ ಆಯ ಮತು ಅಳತೆಗೆ ಸಮವಾಗಿ ಪ್ರಾಚೀನ ಶಿಲ್ಪ ಕಲೆಗೆ ದಕ್ಕೆ ಬರದಂತೆ ನೆಲದಿಂದ ಜಿಡ್ಡೆಯ ವರೆಗೆ 17 ಅಡಿ ಎತ್ತರ ಮತ್ತು 17 ಅಡಿ ಅಗಲವಾಗಿ ಒಟ್ಟು ರಥ ಕಲಶದ ತುದಿಯವರೆಗೆ 63 ಅಡಿ ಎತ್ತರ ಹೊಂದಿದೆ. ಈ ರಥದಲ್ಲಿ ಒಟ್ಟು 6 ಚಕ್ರಗಳಿದ್ದು 8.5 ಅಡಿ ಎತ್ತರವಾಗಿದೆ.
ಇದರಲ್ಲಿ ಅಜ್ಜಿನ ಮರ, ನೆಗಳನ ಅಡ್ಡೆ, ಮತ್ತು ಚಕ್ರಗಳು ಕಿರಾಲು ಬೋಗಿ ಮರದಿಂದ ತಯಾರಿಸಿದ್ದು ಇನ್ನುಳಿದ ಭಾಗಕ್ಕೆ ಸಂಪೂರ್ಣ ಸಾಗುವಾನಿ ಮರವನ್ನು ಬಳಸಲಾಗಿದೆ. ಈ ರಥವು 16 ಅಂತಸ್ತುಗಳ ಚೌಕದಲ್ಲಿ ಆನೆ ಜಂತಿ, ಬಳ್ಳಿಸಾಲು, ಪದ್ಮನ ಸಾಲು, 4 ಅಂತಸ್ತು ಚಿತ್ರದ ವಿಗ್ರಹಗಳು, ವಿಷ್ಣುವಿನ ಚರ್ತುವಂಶಿ ಚಿತ್ರಗಳು, ಶೀವನ ಲೀಲೆಗಳು, ದಕ್ಷಯಜ್ಞ, ಪಾರ್ವತಿ ಕಲ್ಯಾಣ, ಸುಬ್ರಹ್ಮಣ್ಯ ಜನನ, ಕಾರ್ತಿಕೇಯ, ರಾಮಯಾಣ ಭಾಗವಾದ ಪುತ್ರ ಕಾಮ್ಟೇಯಾಗ, ದಶಾವತಾರ, ದಿಕ್ಕುಪಾಲಕರು, ದೇವರು ಕುಳಿತುಕೊಳ್ಳುವ ಪೀಠ, ಆನೆ ಮೇಲೆ ಕುಳಿತ ಸಿಂಹ, ಚತುರ್ವಿಂಶತಿ ಮೂರ್ತಿಗಳು, 4 ಮೂಲೆಯಲ್ಲಿ 5 ಅಡಿ ಎತ್ತರದ ದ್ವಾರಪಾಲಕರೂ ಸೇರಿದಂತೆ ಸಾವಿರಾರೂ ಚಿತ್ರಗಳು ಕಾಷ್ಠ ಶಿಲ್ಪ ಕೆತ್ತನೆಯ ಶಿಲ್ಪಿಗಳಿಂದ ವೈಭವವಾಗಿ ಮೂಡಿಬಂದಿದೆ.
ಸುಮಾರು ಒಂದೂವರೆ ವರ್ಷಗಳ ಅವಯಲ್ಲಿ 42ಕ್ಕೂ ಅಧಿಕ ಮಂದಿ ಶಿಲ್ಪಿಗಳ ಮೂಲಕ ಹಳೆಯ ಶೈಲಿಯಲ್ಲಿಯೇ ನೂತನವಾಗಿ ಈ ಬ್ರಹ್ಮರಥ ನಿರ್ಮಾಣಗೊಂಡಿದೆ.
ಶಿಲ್ಪಿಗಳ ಕಾರ್ಯಕ್ಕೆ ಫಿದಾ!
ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಇವರ ಕೈಚಳಕದಲ್ಲಿ 116ನೇ ರಥವಾಗಿ ಕುಕ್ಕೆ ದೇವಳದ ಬ್ರಹ್ಮರಥ ಮೂಡಿಬಂದಿದೆ. ಇದರಲ್ಲಿ 37 ಬ್ರಹ್ಮರಥ, 73 ಪುಷ್ಪರಥ, 9 ಬೆಳ್ಳಿಯ ರಥ, 2 ಚಿನ್ನದ ಮರದ ರಥ, 1 ಇಂದ್ರ ರಥ, 1 ಚಂದ್ರ ರಥ, 2 ಬಂಡಿ ರಥ ಸೇರಿದಂತೆ ಅನೇಕ ರೀತಿಯಲ್ಲಿ ಹಲವು ಮಾದರಿಯಲ್ಲಿ ರಥ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕರ್ನಾಟಕ ರಾಜ್ಯವಲ್ಲದೇ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ, ವಿಶಾಖಪಟ್ಟಣ, ಚೆನೈ ಇಲ್ಲಿನ ಬಹುತೇಕ ಭಾಗಗಳ ದೇವಾಲಯಗಳಿಗೆ ರಥ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ, ಶಿಲ್ಪಗುರು ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮಡಿಲಿಗೆ ಬಂದಿದೆ. ಈ ಬೃಹತ್ ಕಾರ್ಯದಲ್ಲಿ ಇವರ ಸಹೋದರ ಶಂಕರ ಆಚಾರ್ಯ ಮತ್ತು ಪುತ್ರ ರಾಜಗೋಪಾಲ ಆಚಾರ್ಯ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಂಡಿದ್ದು ಅದೆಷ್ಟೂ ಶಿಲ್ಪಿಗಳ ಕೈಗೆ ದಾರಿದೀಪವಾಗಿದ್ದಾರೆ.
ಬ್ರಹ್ಮರಥ ಮೆರವಣಿಗೆಯಲ್ಲಿ ಬ್ರಹ್ಮರಥ ನಿರ್ಮಾಣದಲ್ಲಿ ಕೈಜೋಡಿಸಿದ ಅಜಿತ್ ಶೆಟ್ಟಿ, ಅನುರಾಧಾ ಮುತ್ತಪ್ಪ ರೈ, ಕರುಣಾಕರ ರೈ, ಚೆನ್ನಪ್ಪ ರೈ, ಚಂದ್ರಹಾಸ ಶೆಟ್ಟಿ, ದಿವಾಕರ ರೈ ಮುಂತಾದವರು ಇದ್ದರು. ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುದ್ದೋಡಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ.,
ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಕುಕ್ಕೆ ದೇವಳದ ಕಾರ್ಯನಿರ್ವಾಹಣಾಕಾರಿ ರವೀಂದ್ರ ಎಮ್.ಎಚ್ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಕೋಟೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋರ್ಕೋಡು ಗೋಪಾಲ ಶೆಟ್ಟಿ, ರಾಜೀವ ರೈ, ಪ್ಲಾಸ್ ಕಮಿಟಿ ಶಿವರಾಮ ರೈ, ಪ್ರೀತಮ್ ರೈ ಇದ್ದರು.