ಕೋಟೇಶ್ವರ ಗಾಣಿಗ ಯುವ ಸಂಘಟನೆ: ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ, ಕೊಡೆ ವಿತರಣೆ, ಸಾಧಕರಿಗೆ ಸನ್ಮಾನ

ಕುಂದಾಪುರ:ಯುವ ಜನತೆ,ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾಗಬೇಕು.ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ.ನಾವು ಸಾಧಿಸುವ ಯೋಜನೆ ಮಾಡುವುದು ಎಲ್ಲಾ ಮುಗಿದ ಮೇಲೆ ಹಾಗಾಗಬಾರದು, ಮೊದಲೇ ಯೋಚಿಸಿ ಯಶಸ್ವಿನ ಕಡೆಗೆ ಸಾಗಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ಹೇಳಿದರು.

ಅವರು ಭಾನುವಾರ ಗಾಣಿಗ ಯುವ ಸಂಘಟನೆ, ಕೋಟೇಶ್ವರ ಘಟಕ, ಗಾಣಿಗ ಮಹಿಳಾ ಸಂಘಟನೆ, ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಗಾಣಿಗ ಸಮಾಜದ ಕೋಟೇಶ್ವರ ಘಟಕ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ, ಕೊಡೆ ವಿತರಣೆ, ಪತ್ರಿಭಾ ಪುರಸ್ಕಾರ, ಹಿರಿಯ ದಂಪತಿ, ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುಧಾಕರ ಗಾಣಿಗ ಕುಂಭಾಶಿ ವಹಿಸಿದ್ದರು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಕೊಗ್ಗ ಗಾಣಿಗ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆಗೈದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ದಂಪತಿಗಳಾದ ಮಾರ್ಕೋಡು ಸೀತಾ ಮತ್ತು ರಾಮಯ್ಯ,ಕೋಟೇಶ್ವರ ದೊಡ್ಡೋಣಿಯ ರಾಜೀವಿ ಮತ್ತು ಶ್ರೀನಿವಾಸ ಗಾಣಿಗ, ಬೀಜಾಡಿ ಜಲಜ ಮತ್ತು ಶೇಷ ಗಾಣಿಗ, ಗೋಪಾಡಿಯ ಮೀನಾಕ್ಷಿ ಮತ್ತು ನಾರಾಯಣ ಗಾಣಿಗ, ಕುಂಭಾಶಿಯ ಶಾಂತ ಮತ್ತು ಮಹಾಬಲ ಟೈಲರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಜತೆಗೆ ಸಾಧಕರಾದ ಬಸ್ರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಗಾಣಿಗ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರವಿ ಗಾಣಿಗ ಆಜ್ರಿ, ಭಾರತೀಯ ಕಿಸಾನ್ ಸಂಘ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಹಾಲಾಡಿ ಸೀತಾರಾಮ ಗಾಣಿಗ, ಬಹುಮುಖ ಪ್ರತಿಭೆಯ ಶಿವಾನಂದ ಕೋಟೇಶ್ವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉದ್ಯಮಿ ಪ್ರಭಾಕರ ಬಿ.ಕುಂಭಾಶಿ, ಗಾಣಿಗ ಯುವ ಸಂಘಟನೆಯ ನೂತನ ಅಧ್ಯಕ್ಷ ಅಭಿಲಾಷ್ ಬಿ.ಎ, ಮಹಿಳಾ ಸಂಘಟನೆ ನೂತನ ಅಧ್ಯಕ್ಷೆ ಪ್ರಭಾವತಿ ಗಾಣಿಗ ಶುಭ ಹಾರೈಸಿದರು. ವಕೀಲರಾದ ಜಾಹ್ನವಿ ಕುಂಭಾಶಿ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಕುಂಭಾಶಿ, ನೂತನ ಪದಾಧಿಕಾರಿಗಳಾದ ಮಂಜುನಾಥ ಗಾಣಿಗ, ಸಂತೋಷ ಗಾಣಿಗ, ಉದಯ ಕುಮಾರ್, ವಿಜಯ ಕೃಷ್ಣಮೂರ್ತಿ, ಕಲಾವತಿ ಅಚ್ಯುತ್, ಕಲ್ಯಾಣಿಶಂಕರ್ ಮೊದಲಾದವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಮಚಂದ್ರ ಗಾಣಿಗ ಸ್ವಾಗತಿಸಿದರು. ಪ್ರತಿಮಾ ಚಂದ್ರಶೇಖರ್ ಪ್ರಾರ್ಥಿಸಿದರು. ಬಿ.ಜಿ.ನಾಗರಾಜ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.