ಕೊಟಕ್​ ಮಹೀಂದ್ರಾ ಬ್ಯಾಂಕ್​ನ ಸಿಇಒ ಉದಯ್​ ಕೊಟಕ್ ಎಂಡಿ ಸ್ಥಾನಕ್ಕೆ ​ ರಾಜೀನಾಮೆ

ನವದೆಹಲಿ: ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕ ಉದಯ್ ಕೊಟಕ್​ ಅವರು ತಮ್ಮ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿದ್ದಾರೆ.ಸರಿಯಾದ ಸಮಯದಲ್ಲಿ ನಾನು ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಕೊಟಕ್​ ಮಹೀಂದ್ರಾ ಬ್ಯಾಂಕ್​ನ ಸಿಇಒ, ಎಂಡಿ ಸ್ಥಾನಕ್ಕೆ ಉದಯ್​ ಕೊಟಕ್​ ಅವರು ರಾಜೀನಾಮೆ ನೀಡಿದ್ದಾರೆ.

.ಎಕ್ಸ್​ನಲ್ಲಿ (ಹಿಂದಿನ ಟ್ವಿಟ್ಟರ್) ಈ ಬಗ್ಗೆ ಮಾಹಿತಿ ನೀಡಿರುವ ಉದಯ್ ಕೊಟಕ್​ ಅವರು, ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉತ್ತರಾಧಿಕಾರದ ಕಾಲ ಇದಾಗಿದೆ. ಬ್ಯಾಂಕ್​ನ ಅಧ್ಯಕ್ಷರು, ನಾನು ಮತ್ತು ಜಂಟಿ ಎಂಡಿ ಎಲ್ಲರೂ ವರ್ಷಾಂತ್ಯದಲ್ಲಿ ಕೆಳಗಿಳಿಯಬೇಕಾಗಿದೆ. ಈ ನಿರ್ಗಮನದಿಂದ ಬ್ಯಾಂಕ್​ನ ಸುಗಮ ವ್ಯವಹಾರ ಸಾಧ್ಯವಾಗಲಿದೆ. ನಾನು ಬ್ಯಾಂಕ್​ನಿಂದ ಹೊರಬರಲು ಇದು ಸಕಾಲವಾಗಿದೆ. ಹೀಗಾಗಿ ನಾನಾಗಿಯೇ ಸ್ವಯಂಪ್ರೇರಣೆಯಿಂದ ಸಿಇಒ ಮತ್ತು ಎಂಡಿ ಹುದ್ದೆಯನ್ನು ತ್ಯಜಿಸುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ತಾವೇ ಕೈಬರಹದಿಂದ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ.

ಅತ್ಯುತ್ತಮ ನಿರ್ವಹಣಾ ತಂಡವಿದೆ: ಸಂಸ್ಥಾಪಕನಾಗಿ ಕೊಟಕ್ ಅನ್ನು ಬ್ರ್ಯಾಂಡ್‌ ಆಗಿ ಪರಿವರ್ತಿಸಿದ ಖುಷಿ ಇದೆ. ಸಂಸ್ಥೆಯ ಮಹತ್ವದ ಹುದ್ದೆಯಿಂದ ಇಳಿದಿದ್ದರೂ, ಬ್ಯಾಂಕ್​ನ ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಷೇರುದಾರನಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. ಬ್ಯಾಂಕ್​ನ ಈಗಿನ ಸ್ಥಿತಿಯನ್ನು ಮುಂದುವರಿಸಿಕೊಂಡು ಸಾಗಲು ನಾವು ಅತ್ಯುತ್ತಮ ನಿರ್ವಹಣಾ ತಂಡವನ್ನು ಹೊಂದಿದ್ದೇವೆ. ನಾವು ದೂರವಾದರೂ ಸಂಸ್ಥೆಯು ಶಾಶ್ವತವಾಗಿ ಬೆಳೆಯುತ್ತದೆ ಎಂದು ಅವರು ಹೇಳಿದ್ದಾರೆ.

ತಮ್ಮ ಅಧಿಕಾರದ ಅವಧಿ ಈ ವರ್ಷದ ಡಿಸೆಂಬರ್​ 31ರ ವರೆಗೂ ಇದ್ದರೂ, ಅದಕ್ಕೂ ಮುಂಚಿತವಾಗಿ ಸೆಪ್ಟೆಂಬರ್​ 1 ರಿಂದಲೇ ಅನ್ವಯವಾಗುವಂತೆ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಎಂಡಿ ಸ್ಥಾನದಿಂದ ಉದಯ್​ ಹಿಂದಡಿ ಇಟ್ಟಿದ್ದರೂ, ಬ್ಯಾಂಕ್​ನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ

ದೀಪಕ್​ ಗುಪ್ತಾ ಮುಂದಿನ ಸಿಇಒ: ಉದಯ್​ ಕೊಟಕ್​ ಅವರಿಂದ ತೆರವಾದ ಸ್ಥಾನಕ್ಕೆ ಸದ್ಯಕ್ಕೆ ದೀಪಕ್​ ಗುಪ್ತಾ ಅವರನ್ನು ಮಧ್ಯಂತರ ಎಂಡಿ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ಮತ್ತು ಬ್ಯಾಂಕ್​ ಸದಸ್ಯರ ಅನುಮೋದನೆಯ ಬಳಿಕ ಡಿಸೆಂಬರ್​ 31 ರವರೆಗೂ ಅವರೇ ಈ ಹುದ್ದೆಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಜೆಪಿ ಮೋರ್ಗಾನ್ ಮತ್ತು ಗೋಲ್ಡ್‌ಮನ್ ಸ್ಯಾಚ್‌ಗಳಂತಹ ಸಂಸ್ಥೆಗಳು ಆರ್ಥಿಕ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನೋಡಿದ್ದೆ. ಭಾರತದಲ್ಲಿ ಅಂತಹ ಸಂಸ್ಥೆಯನ್ನು ರಚಿಸುವ ಕನಸು ಕಂಡೆ. ಈ ಕನಸಿನೊಂದಿಗೆ ನಾನು 38 ವರ್ಷಗಳ ಹಿಂದೆ ಕೊಟಕ್ ಮಹೀಂದ್ರಾವನ್ನು ಪ್ರಾರಂಭಿಸಿದೆ. ಮುಂಬೈನ ಫೋರ್ಟ್‌ನಲ್ಲಿರುವ 300 ಚದರ್​ ಅಡಿ ಕಚೇರಿಯಲ್ಲಿ 3 ಉದ್ಯೋಗಿಗಳೊಂದಿಗೆ ಬ್ಯಾಂಕ್​ ಆರಂಭಿಸಿದೆ. ಇದೀಗ ಆಳವಾದ ಬೇರುಗಳನ್ನು ಬಿಟ್ಟು ಬೆಳೆದಿದೆ ಎಂದು ಅವರು ತಿಳಿಸಿದ್ದಾರೆ