ಕೋಟ: ನಿರ್ಮಾಣ ಹಂತದ ಸ್ಯ್ಲಾಬ್ ಕುಸಿದುಬಿದ್ದು ಕಾರ್ಮಿಕ ಸಾವು; ಇನ್ನೋರ್ವ ಗಂಭೀರ

ಕೋಟ: ನಿರ್ಮಾಣ ಹಂತದ ಮನೆಯ ಸ್ಯ್ಲಾಬ್ ಕುಸಿದುಬಿದ್ದ ಪರಿಣಾಮ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಟತಟ್ಟು ಪಡುಕೆರೆ ಶಿರಸಿ ಮಾರಿಕಾಂಬಾ ದೇವಸ್ಥಾನದ ಸಮೀಪ ಬುಧವಾರ ಸಂಭವಿಸಿದೆ.

ಸಾಲಿಗ್ರಾಮ ಗೆಂಡೆಕೆರೆ ನಿವಾಸಿ ಮಂಜುನಾಥ್ (36) ಮೃತ ಕಾರ್ಮಿಕ. ಅಚ್ಲಾಡಿ ನಿವಾಸಿ ಚೇತನ್ (28) ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಮಂಜುನಾಥ್ ಸಿಮೆಂಟ್ ಗಾರೆ ಕೆಲಸಕ್ಕೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಮಿಶ್ರಿತ ಸಿಮೆಂಟ್‍ ಮನೆಯೊಳಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸ್ಲ್ಯಾಬ್ ಕುಸಿದು ತಲೆಯ ಮೇಲೆ ಬಿದ್ದಿದೆ. ಈ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚೇತನ್ ಸೇಟರಿಂಗ್ ಕೆಲಸ ಮಾಡುತ್ತಿದ್ದು, ಸ್ಲ್ಯಾಬ್ ನಿಲ್ಲುವುದಕ್ಕೆ ಅಳವಡಿಸಿದ್ದ ಕಂಬವನ್ನು ಕಳಚುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಲ್ಯಾಬ್‍ನಡಿ ಚೇತನ್ ಅವರ ಕಾಲು ಸಿಲುಕಿಕೊಂಡು ಗಾಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.