ಕೋಟ: ಲಾರಿ ಡಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಸಾವು

ಕೋಟ: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ಮಣೂರಿನ ಇಂದ್ರಪ್ರಸ್ಥ ಹೋಟೆಲ್ ನ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮಣೂರಿನ ಇಂದ್ರಪ್ರಸ್ಥ ಹೋಟೆಲ್ ನಲ್ಲಿ ವಾಚ್ ಮೆನ್ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಪೂಜಾರಿ (47) ಮೃತಪಟ್ಟ ವ್ಯಕ್ತಿ. ಇವರು ಗುರುವಾರ ಕೆಲಸ ಮುಗಿಸಿಕೊಂಡು ಸಂಜೆ 7.10ರ ಸುಮಾರಿಗೆ ಹೋಟೆಲ್ ಎದುರಿನ ರಾ.ಹೆ. 66ರಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದರು. ಈ ವೇಳೆ ಬ್ರಹ್ಮಾವರದಿಂದ ಕುಂದಾಪುರ ಕಡೆಗೆ ಹಾದು ಹೋಗುವ ಲಾರಿಯೊಂದು ಲಕ್ಷ್ಮಣರಿಗೆ ಡಿಕ್ಕಿ ಹೊಡೆದಿದೆ.

ಇದರಿಂದ ಲಕ್ಷ್ಮಣ ಅವರು ಸ್ಥಳದಲ್ಲೇ ಕುಸಿಬಿದ್ದಿದ್ದು, ಕೂಡಲೇ ಚಿಕಿತ್ಸೆಗಾಗಿ ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಲಕ್ಷ್ಮಣ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಲಾರಿ ಚಾಲಕ ವಿನೋದ್ ಎಂಬಾತ ಅಜಾಗರೂಕತೆಯಿಂದ ಲಾರಿಯನ್ನು ತೀರ ರಸ್ತೆಯ ಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುವುದೇ ಅಪಘಾತಕ್ಕೆ ಕಾರಣ ಎಂದು ದೂರಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.