ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ: ಜೂ.8 ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ

ಕುಂದಾಪುರ: ಕೊರೋನಾ ಮಹಾಮಾರಿ ಹಿನ್ನೆಲೆ ಕಳೆದೆರಡು ತಿಂಗಳುಗಳಿಂದ ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶ ನಿರಾಕರಿಸಲಾಗಿದ್ದು ಕೊನೆಗೂ ಸರ್ಕಾರ ಸೋಮವಾರದಿಂದ ರಾಜ್ಯಾದ್ಯಂತ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿಯೂ ಭರದ ಸಿದ್ಧತೆಗಳು ನಡೆಯುತ್ತಿದ್ದು, ಭಾನುವಾರ ಸಿದ್ದತೆ ಪೂರ್ಣಗೊಳ್ಳಲಿದ್ದು ಸೋಮವಾರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದೇವಸ್ಥಾನದ ಎದುರಿನ ಮುಖ್ಯ ದ್ವಾರದಿಂದ ಒಳ ಪ್ರವೇಶಿಸುವ ಭಕ್ತರು ಹಿಂಭಾಗದ ಆನೆ ಬಾಗಿಲಿನ ಮೂಲಕ ಹೊರ ತೆರಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇವಸ್ಥಾನ ಪ್ರವೇಶ ಮಾಡುವ ಮೊದಲು ಕೈ ಕಾಲು ತೊಳೆದು ಬರುವ ಭಕ್ತರು ಸ್ಯಾನಿಟೈಸ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ದರ್ಶನ ಹೊರತು ಪಡಿಸಿ ಯಾವುದೇ ವಯಕ್ತಿಕ ಪೂಜೆ ಹಾಗೂ ಸಂಕಲ್ಪಗಳಿಗೆ ಅವಕಾಶವಿಲ್ಲ. ಸೇವೆ ಮಾಡಬಯಸುವವರು ಹಣ ಪಾವತಿ ಮಾಡಿದಲ್ಲಿ ಆನ್ ಲೈನ್ ಸೇವಾದಾರರಿಗೆ ಕಳುಹಿಸುವಂತೆ ಅಂಚೆ ಮೂಲಕ ಕುಂಕುಮ ಪ್ರಸಾದ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚಿಸಿರುವ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲು ನೌಕರರು ಹಾಗೂ ಹೊರ ಗುತ್ತಿಗೆ ಯವರಿಗೆ ತರಬೇತಿ ನೀಡಲಾಗಿದೆ.
ವ್ಯವಸ್ಥೆಗಳ ಪೂರ್ವ ಸಿದ್ಧತೆಯ ಬಗ್ಗೆ ಮಾತನಾಡಿದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ. ಅಂತರವನ್ನು ಕಾಯ್ದುಕೊಂಡು ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಧ್ವನಿ ವರ್ಧಕದ ಮೂಲಕ ಭಕ್ತರನ್ನು ಎಚ್ಚರಿಸಲಾಗುವುದು. ಕ್ಷೇತ್ರದಲ್ಲಿ ಹಂತ ಹಂತವಾಗಿ ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.