ಕೆಎಲ್​ ರಾಹುಲ್ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಡದಿಯೊಂದಿಗೆ ಭೇಟಿ

ಬೆಂಗಳೂರು: ಇಂದು ಮಧ್ಯಾಹ್ನ 12.30ಕ್ಕೆ ಭೇಟಿ ನೀಡಿ ದಂಪತಿ ದೇವರ ದರ್ಶನ ಪಡೆದರು. ಈ ವರ್ಷ ಫೆಬ್ರವರಿಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.ಭಾರತ ತಂಡದ ಸ್ಟಾರ್​ ಕ್ರಿಕೆಟಿಗ ವಿಕೆಟ್ ಕೀಪರ್ ಕಮ್​ ಬ್ಯಾಟರ್​ ಕೆಎಲ್ ರಾಹುಲ್ ಪತ್ನಿ ಆಥಿಯಾ ಶೆಟ್ಟಿ ಜೊತೆಗೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಎಲ್​ ರಾಹುಲ್ ಮತ್ತು ಅಥಿಯಾ ಶೆಟ್ಟಿ ಈ ವರ್ಷ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ಮಾದರಿಯ ಏಷ್ಯಾಕಪ್​ನ ತಂಡದ ಅಂತಿಮ 15 ಸದಸ್ಯರ ಬಳಗದಲ್ಲಿ ರಾಹುಲ್​ಗೆ ಸ್ಥಾನ ದೊರೆತಿದೆ. ಐಪಿಎಲ್​ ವೇಳೆ ಗಾಯಗೊಂಡಿರುವ ಕ್ರಿಕೆಟಿಗ ಇಂಗ್ಲೆಂಡ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ)ಯಲ್ಲಿ ಪುನರ್ವಸತಿಗೆ ಒಳಗಾಗಿದ್ದರು. ಸದ್ಯ ಚೇತರಿಸಿಕೊಂಡುರುವ ರಾಹುಲ್​ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಆಗಿದ್ದಾರೆ.

ಭಾರತದಲ್ಲಿ ಏಕದಿನ ವಿಶ್ವಕಪ್​ ಅಕ್ಟೋಬರ್​ 5ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾ ಆಸ್ಟ್ರೇಲಿಯಾದ ವಿರುದ್ಧ 3 ಏಕದಿನ ಪಂದ್ಯದ ಸರಣಿಯನ್ನು ಆಡಲಿದೆ. ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಾಹುಲ್​ ವಿಕೆಟ್​ ಕೀಪರ್ ಮತ್ತು ಬ್ಯಾಟರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.ಪಂತ್​, ರಾಹುಲ್​ ಮತ್ತು ಅಯ್ಯರ್​ ಗಾಯಕ್ಕೆ ತುತ್ತಾಗಿದ್ದರಿಂದ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಕೊರತೆ ಎದ್ದು ಕಾಣುತ್ತಿತ್ತು. 4 ಮತ್ತು 5ನೇ ಬ್ಯಾಟರ್​ನ ಸ್ಥಾನಕ್ಕೆ ಆಯ್ಕೆ ಸಮಿತಿ ನಾನಾ ಪ್ರಯೋಗಗಳನ್ನು ಮಾಡಿದರೂ ಯಶಸ್ಸು ಕಂಡಿರಲಿಲ್ಲ. ವಿಶ್ವಕಪ್​ ಹಿನ್ನೆಲೆಯಲ್ಲಿ ಅಯ್ಯರ್​ ಮತ್ತು ರಾಹುಲ್​ ಗುಣಮುಖರಾಗಿರುವುದು ಭರವಸೆ ಮೂಡಿಸಿದೆ.

ಏಷ್ಯಾಕಪ್​ಗೆ ಭಾರತ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮ. ಏಷ್ಯಾಕಪ್​ನ ಎರಡು ಪಂದ್ಯಗಳಿಗೆ ರಾಹುಲ್​ ಅಲಭ್ಯರಾಗಿರುತ್ತಾರೆ ಎಂದು ಈ ಹಿಂದೆಯೇ ಕೋಚ್​ ದ್ರಾವಿಡ್​ ತಿಳಿಸಿದ್ದರು. ಸಪ್ಟೆಂಬರ್​ 4 ರಂದು ರಾಹುಲ್​ ಅವರ ಫಿಟ್​ನೆಸ್​ ಪರೀಕ್ಷೆಯ ನಂತರ ಏಷ್ಯಾಕಪ್​ ತಂಡದ ಭಾಗವಾಗಲಿದ್ದಾರೆ. ಭಾರತ ಸೂಪರ್​ ಫೋರ್​ನಲ್ಲಿ ಆಡುವ ಆಟಗಳಿಗೆ ರಾಹುಲ್​ ತಂಡಕ್ಕೆ ಸೇರ್ಪಡೆ ಆಗುವ ನಿರೀಕ್ಷೆ ಇದೆ.