ಏಷ್ಯಾಕಪ್​ ಮೂಲಕ ಕೆಎಲ್​ ರಾಹುಲ್​, ಜಸ್ಪ್ರೀತ್​ ಬೂಮ್ರಾ ಮತ್ತೆ ಭಾರತ ತಂಡಕ್ಕೆ

ನವದೆಹಲಿ: ಈಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗಾಯಗೊಂಡು ಕಳೆದ ನವೆಂಬರ್​ನಿಂದ ಕ್ರಿಕೆಟ್​ನಿಂದ ದೂರವುಳಿದಿರುವ ಬೂಮ್ರಾ, ಐಪಿಎಲ್​ನಲ್ಲಿ ಇಂಜ್ಯುರಿಯಾದ ಕೆಎಲ್​ ರಾಹುಲ್​ ಏಷ್ಯಾ ಕಪ್​ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಕೆಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ರಿಷಬ್​ ಪಂತ್​, ಜಸ್ಪ್ರೀತ್​ ಬೂಮ್ರಾ ಗಾಯಗೊಂಡಿದ್ದು, ತಂಡಕ್ಕೆ ಹಿನ್ನಡೆ ಉಂಟಾಗಿದೆ.

ಏಷ್ಯಾ ಕಪ್​ ಮೂಲಕ ಗಾಯಾಳುಗಳಾದ ಕೆಎಲ್​ ರಾಹುಲ್​ ಮತ್ತು ಜಸ್ಪ್ರೀತ್​ ಬೂಮ್ರಾ ಭಾರತ ಕ್ರಿಕೆಟ್​ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

.ರಾಹುಲ್​ ಈಗಾಗಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಫಿಟ್​ನೆಸ್​​ ಪರೀಕ್ಷೆಗೆ ಒಳಗಾಗಿದ್ದು, ಅಗತ್ಯ ತಯಾರಿ ನಡೆಸುತ್ತಿದ್ದಾರೆ. ಬೆವರಿಳಿಸುತ್ತಿರುವ ಆರಂಭಿಕ ಆಟಗಾರ ಏಷ್ಯಾಕಪ್​ಗೆ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ. ಇದೇ ವೇಳೆ ದೀರ್ಘ ಕಾಲದಿಂದ ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಕೂಡ ಏಷ್ಯಾಕಪ್​ಗೆ ಮರಳುವ ಸುಳಿವು ನೀಡಿದ್ದಾರೆ.

ಗಾಯಗೊಂಡಿರುವ ಶ್ರೇಯಸ್​ ಅಯ್ಯರ್​, ರಿಷಬ್​ ಪಂತ್​
ಕೆಎಲ್ ರಾಹುಲ್ ತಮ್ಮ ಫಿಟ್‌ನೆಸ್‌ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾವು ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದು ಏಷ್ಯಾಕಪ್‌ನಲ್ಲಿ ತಂಡವನ್ನು ಸೇರಲು ಸಂಪೂರ್ಣವಾಗಿ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಐಪಿಎಲ್ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗ ಪಂಜಾಬ್​ ಕಿಂಗ್ಸ್​​ ತಂಡದ ನಾಯಕ ಕೆಎಲ್ ರಾಹುಲ್ ಗಾಯಗೊಂಡಿದ್ದರು. ಅಂದಿನಿಂದ ಅವರು ಕ್ರಿಕೆಟ್​​ನಿಂದ ದೂರ ಉಳಿದಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಿಂದ ಹೊರ ಬಿದ್ದಿದ್ದರು. ಇದಲ್ಲದೇ ಮುಂದಿನ ತಿಂಗಳಿಂದ ಆರಂಭವಾಗುವ ವೆಸ್ಟ್ ಇಂಡೀಸ್ ಪ್ರವಾಸದಿಂದಲೂ ರಾಹುಲ್​ ಕೈಬಿಡಲಾಗಿದೆ. ಪ್ರಸ್ತುತ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಭಾರತ, ಐರ್ಲೆಂಡ್ ನಡುವಿನ ಎಲ್ಲ ಮೂರು ಪಂದ್ಯಗಳು ಐರ್ಲೆಂಡ್​ ರಾಜಧಾನಿ ಡಬ್ಲಿನ್‌ನ ಮಲಾಹೈಡ್‌ನಲ್ಲಿ ಆಗಸ್ಟ್ 18 ರಿಂದ 23ರ ವರೆಗೆ ನಡೆಯಲಿವೆ. ಜುಲೈ ಮತ್ತು ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ ಪ್ರವಾಸದ ಬಳಿಕ ಭಾರತ ತಂಡ ಐರ್ಲೆಂಡ್​ಗೆ ಪ್ರವಾಸ ಕೈಗೊಳ್ಳಲಿದೆ.

ಪಂದ್ಯಗಳ ವಿವರ: 18 ಆಗಸ್ಟ್​ : ಮೊದಲ ಪಂದ್ಯ – ಮಲಾಹೈಡ್‌, 20 ಆಗಸ್ಟ್​ : ಎರಡನೇ ಪಂದ್ಯ – ಮಲಾಹೈಡ್‌, 23 ಆಗಸ್ಟ್​ : ಮೂರನೇ ಪಂದ್ಯ – ಮಲಾಹೈಡ್‌

ಜಸ್ಪ್ರೀತ್​ ಬೂಮ್ರಾ ಫಿಟ್​: ಇನ್ನು ಕಳೆದ 6 ತಿಂಗಳಿಗೂ ಹೆಚ್ಚು ಕಾಲದಿಂದ ಕ್ರಿಕೆಟ್​ನಿಂದ ಹೊರಗುಳಿದಿರುವ ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್​ ಬೂಮ್ರಾ ಕೂಡ ಏಷ್ಯಾಕಪ್‌ಗೆ ಟೀಂ ಇಂಡಿಯಾವನ್ನು ಸೇರುವ ಸಾಧ್ಯತೆ ಹೆಚ್ಚಿದೆ.

ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ತಂಡಕ್ಕೆ ಮರಳಲಿದ್ದಾರೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಆದರೆ, ಈಗ ಬೂಮ್ರಾ ಮತ್ತು ರಾಹುಲ್ ಏಷ್ಯಾ ಕಪ್ ಮೂಲಕ ತಂಡಕ್ಕೆ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ, ಇನ್ನಿಬ್ಬರು ಗಾಯಾಳು ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ರಿಷಬ್​ ಪಂತ್​ ಅವರ ವಾಪಸಾತಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಖಚಿತವಾದ ಮಾಹಿತಿ ಬಂದಿಲ್ಲ. ಇದರಿಂದಾಗಿ ಅಯ್ಯರ್ ಮತ್ತು ಪಂತ್ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ಹೇಳಲಾಗಿದೆ.

ಐರ್ಲೆಂಡ್​ ಪ್ರವಾಸ ನಿಗದಿ: ವೆಸ್ಟ್​ ಇಂಡೀಸ್​ ಪ್ರವಾಸದ ಬಳಿಕ ಆಗಸ್ಟ್​ನಲ್ಲಿ ಭಾರತ ಪುರುಷರ ಕ್ರಿಕೆಟ್​ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ T20 ಸರಣಿಯನ್ನು ಆಡಲಿದೆ ಎಂದು ಕ್ರಿಕೆಟ್ ಐರ್ಲೆಂಡ್ ದೃಢಪಡಿಸಿರುವುದಾಗಿ ಐಸಿಸಿ ಮಂಗಳವಾರ ಪ್ರಕಟಿಸಿದೆ. ಸರಣಿಯ ವೇಳಾಪಟ್ಟಿಯನ್ನೂ ಅಂತಿಮಗೊಳಿಸಲಾಗಿದೆ.