ಕಿರಿಮಂಜೇಶ್ವರ: ಜೂನ್ 2 ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಗಣಹೋಮ ಮತ್ತು ವಿದ್ಯಾ ಸರಸ್ವತಿ ಹೋಮದೊಂದಿಗೆ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವು ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು. ಪುಟಾಣಿ ಮಕ್ಕಳನ್ನು ಭವ್ಯ ಮೆರವಣಿಗೆಯಿಂದ ಶಾಲೆಗೆ ಬರಮಾಡಿಕೊಳ್ಳಲಾಯಿತು.
ಶಾಲಾ ಪ್ರಾರಂಭೋತ್ಸವವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಶ್ರೀಯುತ ಗಣೇಶ್ ಮೊಗವೀರ ಅವರು ಶಿಕ್ಷಣ ಕೇವಲ ನಾಲ್ಕು ಗೋಡೆಯ ನಡುವಿನ ಪಾಠ ಪ್ರವಚನಕ್ಕೆ ಸೀಮಿತವಾಗಿರದೆ ಮಕ್ಕಳನ್ನು ಕ್ರೀಡೆ ಸಾಂಸ್ಕೃತಿಕ ರಂಗದಲ್ಲಿಯೂ ಸಜ್ಜುಗೊಳಿಸುವ ಪಣತೊಟ್ಟಿದ್ದೇವೆ, ವಿದ್ಯಾರ್ಥಿಗಳಿಗೆ ಬೇಕಾದ ಇಂಗ್ಲೀಷ್ ಸಂವಹನ ಕೌಶಲ್ಯವನ್ನು ಉತ್ತಮಗೊಳಿಸಲು ಬೇಕಾದ ತರಬೇತಿಯನ್ನು ನಮ್ಮ ಶಾಲೆಯಲ್ಲಿ ನೀಡಲಾಗುತ್ತಿದೆ ಎಂದರು.
ಅತಿಥಿಯಾದ ವಿಷ್ಣುಮೂರ್ತಿ ಐತಾಳ್ ಅವರು “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ” ಎಂದು ಹೇಳುವ ಮೂಲಕ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸನ್ನಡತೆಯನ್ನು ಬೆಳೆಸಿಕೊಂಡು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದರು.
ಮುಖ್ಯಶಿಕ್ಷಕಿಯಾಗಿರುವ ದೀಪಿಕಾ ಆಚಾರ್ಯ ಅವರು ಎಲ್ಲರನ್ನು ಸ್ವಾಗತಿಸುತ್ತಾ,ವಿದ್ಯಾರ್ಥಿಗಳು ಹಿಂದಿನ ವರ್ಷ ಸಾಧಿಸಲಾಗದ ವಿಷಯಗಳನ್ನು ಈ ವರ್ಷ ಸಾಧಿಸಲು ಬೇಕಾದ ಗುರಿಯನ್ನು ಇಟ್ಟುಕೊಂಡು ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಯಶಸ್ಸು ಪಡೆಯಿರಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದ ಸಲುವಾಗಿ ಬೋಧಕ ವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೆಯೇ ವಿದ್ಯಾರ್ಥಿಗಳಿಗೋಸ್ಕರ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಶಿಕ್ಷಕರಾದ ಸುಬ್ರಹ್ಮಣ್ಯ ಮರಾಟಿ ಇವರು ವಂದಿಸಿ ನಿರೂಪಿಸಿದರು.












