ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಿರಣ್ ಕುಮಾರ್ ಉದ್ಯಾವರ

ಉಡುಪಿ: ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್ ಉದ್ಯಾವರ ಅವರು ಇಂದು ಶಾಸಕ ಲಾಲಾಜಿ ಆರ್ ಮೆಂಡನ್ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಕಿರಣ್ ಅವರು ಪ್ರಸ್ತುತ ಯುವ ಕಾಂಗ್ರೆಸ್ ಕಾಪು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷನಾಗಿ ಸೇವೆ ಕಾರ್ಯನಿರ್ವಹಿಸುತ್ತಿದ್ದರು. ಇದರ ಜೊತೆಗೆ ಉದ್ಯಾವರಹಿತ್ಳು ಮೊಗವೀರ ಗ್ರಾಮ ಸಭಾದ ಉಪಾಧ್ಯಕ್ಷ ಹಾಗೂ ಹದಿನಾಲ್ಕು ಪಟ್ನ ಮೊಗವೀರ ಗ್ರಾಮ ಸಭಾದ ಕಮಿಟಿ ಸದಸ್ಯರಾಗಿದ್ದರು. ಆದರೆ ದಿಢೀರ್ ಆಗಿ ಉಂಟಾದ ರಾಜಕೀಯ ಬೆಳವಣಿಗೆಯಿಂದ ಕಿರಣ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಕಿರಣ್ ಅವರು ಕಳೆದ ಒಂದು ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರ ವಿರುದ್ಧ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಇದ್ದರೂ ಎನ್ನಲಾಗಿದೆ. ಆದರೆ ಗ್ರಾಮ ಪಂಚಾಯತ್ ಚುನಾವಣೆಯ ಹೊಸ್ತಿಲಲ್ಲೇ ಕಿರಣ್ ಅವರು ಬಿಜೆಪಿಗೆ ಬಂದಿರುವುದರಿಂದ ಉದ್ಯಾವರ ಭಾಗದಲ್ಲಿ ಬಿಜೆಪಿ ತನ್ನ ಬಲವನ್ನು ವೃದ್ಧಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ಬಿಜೆಪಿ ಮುಖಂಡರಾದ ಸಂತೋಷ್ ಸುವರ್ಣ ಬೊಳ್ಜೆ, ವಿಲ್ಸನ್ ರಾಜಕುಮಾರ್, ವಿಜಯಕುಮಾರ್ ಉದ್ಯಾವರ, ರಾಧಾಕೃಷ್ಣ ಬೊಳ್ಜೆ, ಗಣೇಶ್ ಕುಮಾರ್, ವಿನೋದ್ ಕುಮಾರ್, ಸೋಮನಾಥ್ ದೇವಾಡಿಗ, ಪರಮೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.