ಕ್ರಿಶ್ಚಿಯನ್ ರೈತರೋರ್ವರಿಗೆ ಕೃಪೆ ತೋರಿದ  ನಾಗದೇವ..!  ಕಿನ್ನಿಗೋಳಿಯಲ್ಲೊಂದು ಅಚ್ಚರಿಯ ಘಟನೆ

ಮಂಗಳೂರು: ನೀರಿಲ್ಲದೆ ಒಣಗಿ ಹೋಗಿದ್ದ ಕ್ರಿಶ್ಚಿಯನ್ ರೈತರೋರ್ವರ ಕೃಷಿ ತೋಟಕ್ಕೆ ನಾಗದೇವ ಕೃಪೆ ತೋರಿದ್ದಾನೆ.
ಈ ಅಚ್ಚರಿಯ ಘಟನೆ ನಡೆದಿದ್ದು, ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ನಿಡ್ಡೋಡಿಯ ಗುಂಡೆಲ್ ಎಂಬಲ್ಲಿ. ಇಲ್ಲಿನ ನಿವಾಸಿ ವಿಕ್ಟರ್ ಡಿಸಿಲ್ವರ ಕೃಷಿ ತೋಟಕ್ಕೆ ಈ ಬಾರಿ ಮಳೆ ಇಲ್ಲದೆ ನೀರಿನ ಅಭಾವ ಎದುರಾಗಿತ್ತು. ಹೀಗಾಗಿ ಅವರು ಕಳೆದ ಕೆಲವು ಸಮಯದಿಂದ ತಮ್ಮ ಏಳು ಎಕರೆ ವ್ಯಾಪ್ತಿಯ ಅಡಿಕೆ ತೋಟಗಳ ಮಧ್ಯೆ ನಾಲ್ಕು ಕಡೆ ಕೊಳವೆ ಬಾವಿ ತೋಡಿಸಿದ್ದಾರೆ. ಅದರೆ ನೀರು ಸಿಕ್ಕಿರಲಿಲ್ಲ. ಅದಕ್ಕಾಗಿ 5-6 ಲಕ್ಷ ರೂ.‌ಖರ್ಚು ಮಾಡಿದ್ದರು. ಪ್ರಯೋಜನವಾಗಿಲ್ಲ.
ಜ್ಯೋತಿಷಿ ಮೊರೆ ಹೋದ ಕುಟುಂಬ:
ಹಲವು‌ ರೀತಿಯ ಪ್ರಯತ್ನ‌ ಪಟ್ಟ ಈ ಕುಟುಂಬ ಕೊನೆಗೆ ಉಪ್ಪಿನಂಗಡಿ ಮೂಲದ ಜ್ಯೋತಿಷಿ ಜಗದೀಶ್ ಶಾಂತಿ ಅವರಲ್ಲಿ ಜಾಗದ ಬಗ್ಗೆ ಪ್ರಶ್ನೆ ಇಟ್ಟು, ನಾಗದೋಷ ಮತ್ತು ಜಾಗಕ್ಕೆ ಸಂಬಂಧಿಸಿದ ಜುಮಾದಿ ದೈವದ ದೋಷದ ಬಗ್ಗೆ ಹೇಳಿದರು.
ಜ್ಯೋತಿಷಿ ಸೂಚನೆಯಂತೆ ನಾಗನಿಗೆ ಅದೇ ಜಾಗದಲ್ಲಿ ಆಶ್ಲೇಷ ಬಲಿ ಸೇವೆ ಅರ್ಪಿಸಿದ ಕ್ರಿಶ್ಚಿಯನ್ ಕುಟುಂಬ, ದೈವಗಳಿಗೆ ಸೀಯಾಳ ಅರ್ಪಿಸಿ ಬೇಡಿಕೊಂಡಿದೆ. ಆನಂತರ ಜ್ಯೋತಿಷಿ ಸೂಚಿಸಿದ ಜಾಗದಲ್ಲಿ ಮತ್ತೆ ಬೋರ್‍ವೆಲ್ ಕೊರೆಸಿದ್ದು, ಕೇವಲ 90 ಅಡಿ ಆಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಿಕ್ಕಿದೆ. ಎಲ್ಲೂ‌ ಸಿಗದ ಜಾಗದಲ್ಲಿ ಈಗ ಯಥೇಚ್ಛ ನೀರು ಲಭ್ಯವಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಇತರೆ ಕೊಳವೆ ಬಾವಿಗಳಲ್ಲೂ ಪರಿಶೀಲಿಸಿದಾಗ ಕೇವಲ 15 ಅಡಿ ಆಳದಲ್ಲಿಯೇ ನೀರು ಕಂಡುಬಂದಿದೆ. ಇದು ಊರಿನಲ್ಲಿ ಅಚ್ಚರಿಗೆ ಕಾರಣವಾಗಿದ್ದು, ಜನತೆ ಇದು ನಾಗನೇ ಕೃಪೆ ತೋರಿದ್ದಾನೆ ಎನ್ನುತ್ತಾರೆ. ಅಲ್ಲದೇ ಆದುನಿಕ‌ ಕಾಲದಲ್ಲಿ ವಿಜ್ಞಾನ ಕ್ಕೆ ಸವಾಲೆಸೆಯುವ ಘಟನೆ ನಡೆದಿದ್ದು, ಅಚ್ಚರಿಯಾಗಿದೆ.