ಪ್ರಮುಖ ಆಟಗಾರರು ಅಲಭ್ಯ: ಉಳಿದ 11 ಆಟಗಾರರನ್ನು ಒಗ್ಗೂಡಿಸಿಕೊಂಡು ಕಣಕ್ಕಿಳಿದ ಟೀಂ ಇಂಡಿಯಾ

ಕೊಲೊಂಬೊ: ಯುವ ಆಟಗಾರರ ಸಾಮರ್ಥ್ಯ ಪರೀಕ್ಷೆ ನಡೆಸಲು ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾಗೆ ಈಗ ಅನಿವಾರ್ಯವಾಗಿ ತನ್ನ ಎಲ್ಲಾ ಆಟಗಾರರ ಸೇವೆಯನ್ನು ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಕೊರೊನಾ ವೈರಸ್‌ ಕಾರಣ ಪ್ರಮುಖ ಆಟಗಾರರು ಅಲಭ್ಯರಾದ್ದರಿಂದ ಉಳಿದ ಎಲ್ಲಾ ಆಟಗಾರರನ್ನು ಸೇರಿಸಿಕೊಂಡು ಶ್ರೀಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸಲಾಯಿತು.

ಕೊಲೊಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾತನ್ನೆಲ್ಲಾ ಆಟಗಾರರನ್ನು ಒಗ್ಗೂಡಿಸಿ ಕಣಕ್ಕಿಳಿಯುವಂತಹ ಪರಿಸ್ಥಿತಿ ಎದುರಿಸಿತು. ತಂಡದ ಸ್ಟಾರ್‌ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಅವರಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡ ಬಳಿಕ ಅವರ ಸಂಪರ್ಕಕ್ಕೆ ಬಂದಿದ್ದ ತಂಡದ 8 ಆಟಗಾರರನ್ನು ಕೂಡ ನಿಯಮಾನುಸಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.
ಹೀಗಾಗಿ ದ್ವಿತೀಯ ಟಿ20 ಪಂದ್ಯಕ್ಕೆ 9 ಆಟಗಾರ ಅಲಭ್ಯತೆಯಾದ ಕಾರಣ ಭಾರತ ತಂಡ ಬಾಕಿ ಉಳಿದ 11 ಆಟಗಾರರನ್ನು ಒಗ್ಗೂಡಿಸಿ ಪಂದ್ಯಕ್ಕೆ ಕಣಕ್ಕಿಳಿಯುವ ಸ್ಥಿತಿ ಎದುರಿಸಿತು. ಇದರಿಂದ ಕೇವಲ 5 ಪರಿಣತ ಬ್ಯಾಟ್ಸ್‌ಮನ್‌ಗಳನ್ನು ಮಾತ್ರವೇ ಹೊಂದಲು ಸಾಧ್ಯವಾಯಿತು.

ಕೋವಿಡ್‌-19 ಸೋಂಕಿತ ಕೃಣಾಲ್‌ ಪಾಂಡ್ಯ ಅವರ ಸಂಪರ್ಕಕ್ಕೆ ಬಂದಿದ್ದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್‌ ಯಾದವ್, ಪೃಥ್ವಿ ಶಾ, ದೀಪಕ್ ಚಹರ್, ಕೆ ಗೌತಮ್, ಇಶಾನ್ ಕಿಶನ್, ಯುಝ್ವೇಂದ್ರ ಚಹಲ್ ಮತ್ತು ಮನೀಶ್ ಪಾಂಡೆ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹೀಗಾಗಿ 2ನೇ ಪಂದ್ಯದಲ್ಲಿ ದೇವದತ್ ಪಡಿಕ್ಕಲ್, ನಿತೀಶ್ ರಾಣಾ, ಋತುರಾಜ ಗಾಯಕ್ವಾಡ್ ಮತ್ತು ಚೇತನ್ ಸಕಾರಿಯಾಗೆ ಪದಾರ್ಪಣೆ ಭಾಗ್ಯ ಲಭ್ಯವಾಯಿತು.