ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಸಂಭ್ರಮದ ಬ್ರಹ್ಮಕಲಶೋತ್ಸವ

ಮಂಗಳೂರು: ದುಷ್ಟ ಅರುಣಾಸುರ ದಾಷ್ಟ್ಯತನ ಹೆಚ್ಚಾದಾಗ ಶ್ರೀ ದೇವಿ ದುಂಬಿಯಾಗಿ ಅರುಣಾಸುರನನ್ನು ವಧಿಸಿ ಶ್ರೀ ದೇವಿ ದುರ್ಗಾಪರಮೇಶ್ವರಿಯಾಗಿ ಕಟೀಲು ಕ್ಷೇತ್ರದಲ್ಲಿ ಉದ್ಭವ ಮೂರ್ತಿಯಾಗಿ ನೆಲೆ ನಿಲ್ಲುತ್ತಾಳೆ. ಇಂತಹ ಪುಣ್ಯಕ್ಷೇತ್ರ
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ೧೨ ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಮನದ ಇಷ್ಟಾರ್ಥ ನೆರವೇರಿಸುವ ಭ್ರಮರಾಂಭಿಕೆ ಬ್ರಹ್ಮಕಲಶೋತ್ಸವ ಅಂಗವಾಗಿ ಜನವರಿ 22ರಿಂದ ಕಟೀಲು ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಇಂದು ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಂಡು, 9.37ಕ್ಕೆ ಮೀನ ಲಗ್ನದಲ್ಲಿ ಶ್ರೀ ದೇವಿಗೆ ಬಹ್ಮಕಲಶಾಭಿಷೇಕ ನಡೆದು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.
ಬಳಿಕ ಅವಸ್ರುತಬಲಿ ಮಹಾಪೂಜೆ ಪಲ್ಲಪೂಜೆ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ವಿಶೇಷ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಭಕ್ತರು ದೇವರ ಪ್ರಸಾದ ಸ್ವೀಕರಿಸಿದ್ದರು. ಅಲ್ಲದೇ ಭಕ್ತರ ಬಾಯಾರಿಕೆ ನೀಗಿಸಲು ಪಾನಕ, ಕಲ್ಲಂಗಡಿ ಹಣ್ಣನ್ನು ನೀಡಲಾಗುತ್ತಿತು.
35 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, 600ಕ್ಕೂ ಮೀರಿ ಸ್ವಯಂಸೇವಕರು ಪಾರ್ಕಿಂಗ್‌ನಲ್ಲಿ ಹಾಗೂ ಇತರ ಕಡೆ ಸಾವಿರಕ್ಕೂ ಅಧಿಕ ಸ್ವಯಂಸೇವಕರು ಕಾರ್ಯ ನಿರ್ವಾಹಿಸುತ್ತಿದ್ದಾರೆ.
ಬ್ರಹ್ಮಕಲಶೋತ್ಸವದ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆಬ್ರವರಿ 3 ರವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ನಾಗಮಂಡಲ, 2ರಂದು ಕೋಟಿಜಪ ಯಜ್ಞ ಹಾಗೂ 3 ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ.