ದರ್ಬೆಯಿಂದ 2 ಅಡಿ ಎತ್ತರದ ಏಳು ಹೆಡೆಯ ನಾಗದೇವರ ಬಿಂಬ ಸ್ವರೂಪದ ಕಲಾಕೃತಿ ರಚಿಸಿ ದೇವಳಗಳಿಗೆ ಉಚಿತವಾಗಿ ನೀಡುವ ಅರ್ಚಕ ಕಾಶೀನಾಥ್ ಭಟ್!!

ಉಡುಪಿ: ಸಮೀಪದ ಗ್ರಾಮೀಣ ಪ್ರದೇಶವಾದ ಕಲ್ಯಾಣಪುರ ಶ್ರೀ ರಾಮಂಜೇನೆಯ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಕಾಶೀನಾಥ್ ಭಟ್ ಇವರು ಕಳೆದ 35 ವರ್ಷಗಳಿಂದ ಶ್ರೀ ಅನಂತ ಪದ್ಮನಾಭ ವೃತಕ್ಕೆ ( ನೋಪಿ ) ಪೂಜೆಗೆ ಅಗತ್ಯವಾಗಿ ಬೇಕಾದ ಅನಂತ ಶೇಷನಾಗ ವಿಶೇಷ ವಾಗಿ ಅಷ್ಟ ಪವಿತ್ರ ನಾಗಮಂಡಲದ ಸ್ವರೂಪದಲ್ಲಿ ದರ್ಬೆ ಮುಖೇನ ಏಳು ಹೆಡೆಯ ನಾಗದೇವರ ಬಿಂಬ ಸ್ವರೂಪದ ಕಲಾಕೃತಿ ರಚನೆ ಮಾಡಿ ಉಡುಪಿ ಆಸುಪಾಸು ದೇವಳಕ್ಕೆ ಉಚಿತವಾಗಿ ನೀಡುತ್ತಿದ್ದಾರೆ.

ವಿವಿಧ ದೇವಸ್ಥಾನಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಜಿ.ಎಸ್.ಬಿ ಸಮಾಜದ ಪುರೋಹಿತ ವೇದಮೂರ್ತಿ ಕಾಶಿ ಭಟ್ಟರ ತಂದೆ ಹರಿನಾರಾಯಣ ಭಟ್ಟರಿಂದ ಕಲಿತ ದರ್ಬೆಯ ಕಲಾಕೃತಿಗೆ ಬೇಕಾದ ದರ್ಬೆಗಳನ್ನು ಕೆಮ್ಮಣ್ಣುವಿನಿಂದ ತಂದು ಅವರ ಶ್ರೀ ರಾಮ ನಿವಾಸದಲ್ಲಿ 15 ದಿನಗಳ ಕಾಲ ದರ್ಬೆಗಳನ್ನು ಸಮತೊಟ್ಟು ಗೊಳಿಸಿ ಹೆಣೆದು 2 ಅಡಿ ಎತ್ತರದ ಏಳು ಹೆಡೆಯ ನಾಗದೇವರ ಬಿಂಬ ಸ್ವರೊಪದ ಕಲಾಕೃತಿ ರಚನೆ ಮಾಡಿದ್ದಾರೆ.

ಈ ಬಾರಿ ಸುಮಾರು 19 ಬಿಂಬ ಕಲಾಕೃತಿ ರಚಿಸಿ ಉಡುಪಿ ಸಮೀಪದ ಉದ್ಯಾವರ ವೀರ ವಿಠಲ ದೇವಸ್ಥಾನ, ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ತೆಂಕಪೇಟೆಯ ಆಚಾರ್ಯ ಮಠ, ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನ, ಬ್ರಹ್ಮಾವರ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಹಾಗೂ ಹಿರಿಯ ಮನೆತನದ ದೇವರ ಪೂಜೆಗೆ ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಬಹು ಅಪರೂಪದ ಈ ಕಲಾಕೃತಿ ಕಲೆಯನ್ನು ತಮ್ಮ ಜೊತೆಯಲ್ಲಿ ಕಾರ್ಯ ನಿರ್ವಹಿಸುವ ಅರ್ಚಕರಿಗೆ ಮಕ್ಕಳಿಗೆ. ಪತ್ನಿ ಭಾಗ್ಯಲಕ್ಷ್ಮೀ ಭಟ್, ಸೂಸೆಯಂದಿರಿಗೆ ತರಬೇತಿ ನೀಡುತ್ತಾ ದೇವರ ಸೇವೆಯನ್ನು ಮಾಡುವುದರ ಜೊತೆಗೆ ಕಲೆ ಉಳಿಸಿ ಬೆಳಸುವ ಪ್ರಯತ್ನ ಇವರದಾಗಿದೆ.
ಅರ್ಚಕರಾಗಿ ಸೇವೆ: ಉಡುಪಿ ನಯಂಪಳ್ಳಿ ಕಾಶೀಮಠ, ಶ್ರೀ ರಾಮ ಮಂದಿರ ದೊಂಡೇರಂಗಡಿ, ಶ್ರೀ ವೀರ ವಿಠಲ ದೇವಸ್ಥಾನ ಭದ್ರಗಿರಿ , ಶ್ರೀ ರಾಮಂಜನೆಯ ದೇವಸ್ಥಾನ ಕಲ್ಯಾಣಪುರ, ಹಾಗೂ ದೇವಸ್ಥಾನದ ಧಾರ್ಮಿಕ ಕಾರ್ಯ, ಹೋಮ, ಯಜ್ಞಾದಿಗಳಲ್ಲಿ, ನಾಗಮಂಡಲ, ಆಶ್ಲೇಷಾ ಬಲಿ , ನಾಗ ಪ್ರತಿಷ್ಠೆಗಳಲ್ಲಿ ಅರ್ಚಕರಾಗಿ ಸೇವೆ ನೀಡುತ್ತಿದ್ದಾರೆ.