ಕಾರ್ಕಳ: ರಸ್ತೆಯಲ್ಲಿ ಹೊಸವರ್ಷ ಸಂಭ್ರಮಾಚರಣೆ; ಕಾರು ಡಿಕ್ಕಿ ಹೊಡೆದು ಯುವಕರಿಬ್ಬರು ಮೃತ್ಯು

ಕಾರ್ಕಳ: ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದು ಯುವಕರಿಬ್ಬರು ಮೃತಪಟ್ಟ ದಾರುಣ ಘಟನೆ ಗುರುವಾರ ತಡರಾತ್ರಿ ಕಾರ್ಕಳದ ಮಿಯಾರು ಕಾಜರಬೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಬಿಜಾಪುರ ಮೂಲದ ಶರಣು ಹಾಗೂ ಸಿದ್ದು ಮೃತ ಯುವಕರು. ಇವರು ಸ್ನೇಹಿತರಾದ ತೌಸಿಫ್ ಹಾಗೂ ಬಸವರಾಜು ಅವರೊಂದಿಗೆ ಸೇರಿಸಿಕೊಂಡು ರಸ್ತೆಯಲ್ಲಿ ಹ್ಯಾಪಿ ನ್ಯೂಯರ್ ಎಂದು ಬರೆಯಲು ಹೋಗಿದ್ದಾರೆ.

ಈ ವೇಳೆ ಬಜಗೋಳಿ ಕಡೆಯಿಂದ ಪುಲ್ಕೇರಿ ಕಡೆಗೆ ಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಶರಣು ‍ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು, ಸಿದ್ದು ಜ. 1ರ ಬೆಳಿಗ್ಗಿನ ಜಾವ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ತೌಸಿಫ್ ಹಾಗೂ ಬಸವರಾಜು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಕಾರ್ಕಳದ ಮೂಕಾಂಬಿಕಾ ಅರ್ಥ್‌ ಮೂವರ್ಸ್‌ನ ಉದ್ಯೋಗಿಗಳಾಗಿದ್ದರು ಎಂದು ತಿಳಿದುಬಂದಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.