ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್‌ಗೆ ನಕಲಿ ಸಹಿ: ಡಾಟಾ ಎಂಟ್ರಿ ಆಪರೇಟರ್ ಬಂಧನ

ಉಡುಪಿ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನಿಸಿದ ಆರೋಪದಡಿ ಮಾಜಿ ಡಾಟಾ ಎಂಟ್ರಿ ಆಪರೇಟರ್‌ನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆಯ ಅಕ್ಷಯ ದೇವಾಡಿಗ (29) ಎಂದು ಗುರುತಿಸಲಾಗಿದೆ.

ಆರೋಪಿ 2022ರ ಡಿಸೆಂಬರ್‌ 1ರಿಂದ 2026ರ ಮೇ 7ರವರೆಗೆ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಡುವ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ.

ಇಲಾಖೆಯ ಲೆಕ್ಕ ಪರಿಶೋಧನೆ ವೇಳೆ ಕರ್ತವ್ಯ ಲೋಪ ಹಾಗೂ ಅಕ್ರಮಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ವಿವರಣೆ ಕೇಳಿದಾಗ ಯಾವುದೇ ಮಾಹಿತಿ ನೀಡದೆ ರಾಜೀನಾಮೆ ನೀಡಿ ಕೆಲಸಕ್ಕೆ ಗೈರಾಗಿದ್ದ ಎನ್ನಲಾಗಿದೆ.

ನಂತರ ದೇವಸ್ಥಾನದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಚಾಲ್ತಿ ಖಾತೆಗೆ ಸಂಬಂಧಿಸಿದ ಆರು ಚೆಕ್‌ಗಳನ್ನು ಜೂನ್‌ 24ರಂದು ನಗದೀಕರಣಕ್ಕೆ ಸಲ್ಲಿಸಲಾಗಿತ್ತು.

ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ, ದೇವಸ್ಥಾನ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಾರದೆ ಅವರ ಸಹಿಯನ್ನು ನಕಲಿ ಮಾಡಿ ಚೆಕ್‌ಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.